ಧರ್ಮಶಾಲಾ,(ಹಿಮಾಚಲ ಪ್ರದೇಶ) : ಜರ್ಮನಿಯಲ್ಲಿ ಅತಿವೃಷ್ಟಿಯಿಂದ ಪ್ರವಾಹ ಉಂಟಾಗಿ ಸಾಕಷ್ಟು ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಚಾನ್ಸಲರ್ ಏಜೆಂಲಾ ಮರ್ಕೆಲ್ ಮತ್ತು ಬೆಲ್ಜಿಯಂ ಪ್ರಧಾನಿ ಅಲೆಕ್ಸಾಂಡರ್ ಡಿ ಕ್ರೂ ಅವರಿಗೆ ಬೌದ್ಧ ಗುರು ದಲೈ ಲಾಮಾ ಪತ್ರ ಬರೆದು ಕಾಳಜಿ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಯೂರೋಪಿಯನ್ ರಾಷ್ಟ್ರಗಳಲ್ಲಿ ಪ್ರವಾಹದಿಂದ ಭಾರಿ ಹಾನಿಯುಂಟಾಗಿರುವ ಸುದ್ದಿ ತಿಳಿದು ನನಗೆ ಬಹಳ ದುಃಖವಾಗಿದೆ. ಅದರಲ್ಲೂ ಬೆಲ್ಜಿಯಂ ಮತ್ತು ಜರ್ಮನಿಯಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿ ವಿಚಾರಕ್ಕೆ ತುಂಬಾ ನೋವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಜೊತೆಗೆ ಸಾಕಷ್ಟು ಪ್ರಾಣ ಹಾನಿ ಸಂಭವಿಸುವುದರ ಜೊತೆಗೆ, ಆಸ್ತಿ ಪಾಸ್ತಿ ನಷ್ಟವಾಗಿದೆ ಮತ್ತು ಸಾವಿರಾರು ಮಂದಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸಂಕಷ್ಟದಲ್ಲಿ ಸಿಲುಕಿದವರಿಗೆ ಎಲ್ಲರೂ ಸಹಾಯಹಸ್ತ ಚಾಚಬೇಕು. ದುರಂತದಲ್ಲಿ ಪ್ರಾಣಹಾನಿಯಾದವರಿಗೆ ನನ್ನ ಸಂತಾಪ ಅರ್ಪಿಸುವುದರ ಜೊತೆಗೆ, ಸಂಕಷ್ಟದಲ್ಲಿ ಸಿಲುಕಿದವರು ಬೇಗ ಚೇತರಿಕೆ ಕಾಣಲೆಂದು ನಾನು ಬಯಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: 'ಪೆಗಾಸಸ್' ಕುತಂತ್ರದ ಸ್ಫೋಟಕ ಮಾಹಿತಿ ಬಹಿರಂಗಪಡಿಸ್ತಾರಾ ಸುಬ್ರಮಣಿಯನ್ ಸ್ವಾಮಿ?
ಪ್ರವಾಹದ ಕಾರಣದಿಂದಾಗಿ ಜರ್ಮನಿಯಲ್ಲಿ ಸುಮಾರು 156 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಪಶ್ಚಿಮ ಯೂರೋಪ್ ರಾಷ್ಟ್ರಗಳಲ್ಲಿ ಮೃತಪಟ್ಟವರ ಸಂಖ್ಯೆ 183ಕ್ಕೆ ಏರಿಕೆಯಾಗಿದೆ.