ವಲ್ಸಾದ್/ಗುಜರಾತ್: ಇಲ್ಲಿನ ನಿವಾಸಿ ಗೌರವ್ ಪಟೇಲ್ ಎಂಬ ಯುವಕ ತನ್ನ ಎಂಗೇಜ್ಮೆಂಟ್ ದಿನ ಸಾವನ್ನಪ್ಪಿದ ಮೂವರು ಕೊರೊನಾ ರೋಗಿಗಳ ಶವಗಳ ಅಂತಿಮ ಸಂಸ್ಕಾರ ಮಾಡಲು ತಮ್ಮ ನಿಶ್ಚಿತಾರ್ಥ ಸಮಾರಂಭವನ್ನೇ ಬಿಟ್ಟು ಬಂದಿದ್ದಾರೆ.
ಸ್ಮಶಾನದಲ್ಲಿ ಗೌರವ್ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಸದ್ಯ ಕೋವಿಡ್ ಹಿನ್ನೆಲೆ ಅಲ್ಲಿಯೇ ಕೊರೊನಾ ವಾರಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಏಪ್ರಿಲ್ 26 ರಂದು ಕೋವಿಡ್ನಿಂದ ಮೃತಪಟ್ಟ ಮೂರು ಮೃತ ದೇಹಗಳನ್ನು ಪಾರ್ಡಿಯಲ್ಲಿರುವ ಶವಾಗಾರಕ್ಕೆ ತರಲಾಯಿತು. ಆದರೆ, ಈ ವೇಳೆ ಹೆಣ ಸುಡುವ ಯಂತ್ರದಲ್ಲಿ ಸ್ವಲ್ಪ ತೊಂದರೆ ಕಂಡು ಬಂದಿದೆ, ಇದರಿಂದಾಗಿ ವ್ಯವಸ್ಥಾಪಕರು ಗೌರವ್ ಅವರನ್ನು ಸಹಾಯಕ್ಕಾಗಿ ಕರೆದಿದ್ದಾರೆ. ಇನ್ನು ತನ್ನ ನಿಶ್ಚಿತಾರ್ಥ ಹಿನ್ನೆಲೆ ರಜೆಯಲ್ಲಿದ್ದ ಗೌರವ್ ಕರೆ ಬಂದ ಕೂಡಲೇ ತಕ್ಷಣವೇ ಎಂಗೇಜ್ಮೆಂಟ್ ಧಿರಿಸಿನಲ್ಲೇ ಶ್ಮಶಾನಕ್ಕೆ ತೆರಳಿ ಹೆಣ ಸುಡುವ ಒಲೆಯಲ್ಲಿ ದುರಸ್ತಿ ಮಾಡಿ ಮೂರು ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಗೌರವ್ ತಂದೆ ಸಹ ಇದೇ ಸ್ಮಶಾನದಲ್ಲಿ 20 ವರ್ಷಗಳಿಂದ ಕಾರ್ಯನಿರ್ವಹಿಸಿದ್ದು, ಯಾವುದೇ ಸಮಾರಂಭದಲ್ಲಿದ್ದರೂ, ರಜೆ ಮೇಲಿದ್ದರೂ ಅಪ್ಪ ಮಗ ತುರ್ತು ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.