ಪಾಟ್ನಾ: ಅರುಣಾಚಲ ಪ್ರದೇಶದ ಏಳು ಜೆಡಿಯು ಶಾಸಕರು ಬಿಜೆಪಿಗೆ ಸೇರಿದ ಬಳಿಕ ಬಿಹಾರದಲ್ಲಿ ಬಿಜೆಪಿ - ಜೆಡಿಯು ಸಂಬಂಧ ಹಳಸಿರುವ ಲಕ್ಷಣಗಳು ಕಂಡು ಬರುತ್ತಿದ್ದು, ಇದನ್ನು ಪುಷ್ಠೀಕರಿಸುವಂತೆ ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಮೈತ್ರಿ ಮಾಡಿಕೊಂಡಿದ್ದ ಜೆಡಿಯು ಮತ್ತು ಬಿಜೆಪಿ ಪಕ್ಷಗಳು ಗೆದ್ದು ಸರ್ಕಾರ ರಚಿಸಿತ್ತು. ಚುನಾವಣೆಯಲ್ಲಿ ರಾಜ್ಯದ ಬಲಿಷ್ಠ ಪಕ್ಷ ಜೆಡಿಯು ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಗೆದ್ದಿತ್ತು. ಇದಕ್ಕೆ ಒಂದು ರೀತಿಯಲ್ಲಿ ಬಿಜೆಪಿಯೇ ಕಾರಣ ಎಂದು ಹೇಳಲಾಗ್ತಿತ್ತು. ಚುನಾವಣೆ ಬಳಿಕ ಕಡಿಮೆ ಸ್ಥಾನ ಪಡೆದರೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರಿಗೆ ಬಿಜೆಪಿ ಸಿಎಂ ಸ್ಥಾನ ನೀಡಿತ್ತು. ಆದರೆ, ಈಗ ಬಿಜೆಪಿ ಜೆಡಿಯು ಮೇಲೆ ಸವಾರಿ ಮಾಡುತ್ತಿದ್ದು, ದೊಡ್ಡಣ್ಣನಂತೆ ವರ್ತಿಸುತ್ತಿದೆ ಎಂಬುವುದು ಜೆಡಿಯು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಓದಿ : 'ದೆಹಲಿಯಿಂದ ಬರುವ ಬಿಜೆಪಿ ನಾಯಕರು ಯಾವತ್ತಿಗೂ ಹೊರಗಿನವರೆ': ಮಮತಾ ಟಾಂಗ್
ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಕಡಿಮೆ ಸ್ಥಾನ ಪಡೆಯುವಂತೆ ಮಾಡಲು ಬಿಜೆಪಿ ಪ್ರಯತ್ನಸಿದೆ. ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ರ ಪಕ್ಷದ ಅಭ್ಯರ್ಥಿಗಳನ್ನು ಜೆಡಿಯು ವಿರುದ್ಧ ಕಣಕ್ಕಿಳಿಸಿರುವುದು ಇದರ ಒಂದು ಭಾಗವಾಗಿದೆ ಎಂಬುವುದು ಜೆಡಿಯು ನಾಯಕ ಆರೋಪ. ಒಟ್ಟಿನಲ್ಲಿ ಬಿಜೆಪಿ - ಜೆಡಿಯು ಮೈತ್ರಿ ಪಕ್ಷಗಳ ಒಳ ಜಗಳ ಎನ್ಡಿಎ ಸರ್ಕಾರಕ್ಕೆ ಕುತ್ತು ತರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.