ಕೃಷ್ಣಾ ಜಿಲ್ಲೆ,ಆಂಧ್ರಪ್ರದೇಶ : ಆತನ ಹೆಸರು ಬೋನೆಪುಡಿ ದುರ್ಗಾಪ್ರಸಾದ್, ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಜಯವಾಡ ನಗರದ ಗಾಯತ್ರಿನಗರದ ನಿವಾಸಿ. ರೈಲ್ವೆ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ಇವರು ಬಿಎಸ್ಎನ್ಎಲ್ನ ಸಿಮ್ ಕಾರ್ಡ್ ಅನ್ನು ಬಳಸುತ್ತಿದ್ದರು. ಕೆಲವು ದಿನಗಳ ಹಿಂದೆ ಅವರ ಸಿಮ್ ಕಾರ್ಡ್ ಇದ್ದಕ್ಕಿದ್ದಂತೆ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಿದೆ.
ಈ ಬಗ್ಗೆ ದೂರು ಸಲ್ಲಿಸಲು ಸಮೀಪದಲ್ಲಿರುವ ಚುಟ್ಟುಗುಂಟಾ ಬಿಎಸ್ಎನ್ಎಲ್ ಸೆಂಟರ್ಗೆ ತೆರಳಿದಾಗ ಅವರಿಗೆ ಆಘಾತವೊಂದು ಕಾದಿತ್ತು. ಬೋನೆಪುಡಿ ದುರ್ಗಾಪ್ರಸಾದ್ ಮಾತ್ರವಲ್ಲದೇ, ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಿದ ಬಿಎಸ್ಎನ್ಎಲ್ ಸೆಂಟರ್ನ ಸಿಬ್ಬಂದಿಗೂ ಕೂಡ ಅಚ್ಚರಿಯಾಗಿತ್ತು.
ಶಾಕಿಂಗ್ ವಿಚಾರವೆಂದರೆ ದುರ್ಗಾಪ್ರಸಾದ್ ಅವರ ಬ್ಯಾಂಕ್ ಖಾತೆಗಳಿಂದ ಸುಮಾರು 19 ಲಕ್ಷ ರೂಪಾಯಿ ಮಾಯವಾಗಿತ್ತು. ಬಿಎಸ್ಎನ್ಎಲ್ ಸಿಬ್ಬಂದಿಯ ಸಣ್ಣ ತಪ್ಪು ಮತ್ತು ಅಜಾಗರೂಕತೆಗೆ ದುರ್ಗಾಪ್ರಸಾದ್ ಹಣವನ್ನು ಕಳೆದುಕೊಂಡಾಗಿತ್ತು.
ದುರ್ಗಾಪ್ರಸಾದ್ ಹಣ ಕಳೆದುಕೊಂಡಿದ್ದು ಹೇಗೆ?: ದುರ್ಗಾಪ್ರಸಾದ್ ಅವರ ಬಿಎಸ್ಎನ್ಎಲ್ ಸಿಮ್ ಸ್ಥಗಿತವಾವುದಕ್ಕೂ ಮುಂಚೆ, ಓರ್ವ ಅಪರಿಚಿತ ವ್ಯಕ್ತಿ ಬಿಎಸ್ಎನ್ಎಲ್ ಸೆಂಟರ್ಗೆ ಆಗಮಿಸಿದ್ದು, ತನ್ನನ್ನೇ ದುರ್ಗಾಪ್ರಸಾದ್ ಎಂಬುದಾಗಿ ಬಿಂಬಿಸಿಕೊಂಡಿದ್ದಾನೆ. ದುರ್ಗಾಪ್ರಸಾದ್ ಅವರ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ಆಗಮಿಸಿದ್ದ ಆತ, ಅದೇ ನಂಬರ್ನ ಬೇರೆ ಸಿಮ್ ನೀಡುವಂತೆ ಕೇಳಿದ್ದಾನೆ.
ಬೇರೆ ಪ್ರೂಫ್ಗಳನ್ನು ಕೇಳದ ಬಿಎಸ್ಎನ್ಎಲ್ ಸಿಬ್ಬಂದಿ ಆ ವ್ಯಕ್ತಿಗೆ ಬಿಎಸ್ಎನ್ಎಲ್ ಸಿಮ್ ಅನ್ನು ನೀಡಿದ್ದಾರೆ. ಹೊಸ ಬಿಎಸ್ಎನ್ಎಲ್ ಸಿಮ್ ಸಕ್ರಿಯವಾದ ನಂತರ ಹಳೇ ನಂಬರ್ ಸ್ಥಗಿತಗೊಂಡಿದೆ. ಹಳೆಯ ಅಂದರೆ ದುರ್ಗಾಪ್ರಸಾದ್ ಬಳಿ ಇದ್ದ ಸಿಮ್ ಸ್ಥಗಿತವಾದ ನಂತರ, ತನ್ನ ಬಳಿಯಿದ್ದ ಹೊಸ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಮಾಡಿಕೊಂಡಿದ್ದ ಆರೋಪಿ, ಮೊಬೈಲ್ ನಂಬರ್ಗೆ ಲಿಂಕ್ ಆಗಿದ್ದ ಮೂರು ಬ್ಯಾಂಕ್ ಅಕೌಂಟ್ಗಳಿಂದ ಸುಮಾರು 19 ಲಕ್ಷ ರೂ. ದೋಚಿದ್ದಾನೆ. ಈಗ ಸಂತ್ರಸ್ತ ದುರ್ಗಾಪ್ರಸಾದ್ ಸೈಬರ್ ಕ್ರೈಮ್ ಪೊಲೀಸರ ಮೊರೆ ಹೋಗಿದ್ದು, ಪರಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಗಂಡನನ್ನೇ ಬರ್ಬರವಾಗಿ ಕೊಂದ ಹೆಂಡತಿ!