ನವದೆಹಲಿ: ದೇಶದಲ್ಲಿನ ಸ್ಮಾರಕಗಳು ಮತ್ತು ಸ್ಥಳಗಳಲ್ಲಿ ಹೆಚ್ಚಿನವು ಮೊಘಲ್ ಹಾಗೂ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಾಕ್ಷಿಯಾಗಿದೆ. 1857ರ ಕ್ರಾಂತಿಯಿಂದ ಸ್ವಾತಂತ್ರ್ಯ ಹೋರಾಟದವರೆಗೆ ಈ ಸ್ಮಾರಕಗಳು ಮತ್ತು ಪ್ರದೇಶಗಳು ದೈನಂದಿನ ಜೀವನದ ಭಾಗವಾಗಿಯೇ ಇದ್ದವು. ಅಂತಹ ಸ್ಥಳಗಳ ಪೈಕಿ ದೆಹಲಿಯ ಚಾಂದಿನಿ ಚೌಕ್ ಕೂಡ ಒಂದು.
ಚಾಂದಿನಿ ಚೌಕ್ ರಾಷ್ಟ್ರ ರಾಜಧಾನಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಏಕೆಂದರೆ ಸ್ಮಾರಕ ಎಷ್ಟೋ ಆಡಳಿತಗಾರರಿಗೆ ಸಾಕ್ಷಿಯಾಗಿದೆ. ಆದರೆ, ಇಂದಿಗೂ ತನ್ನ ಹೊಳಹು ಕಳೆದುಕೊಂಡಿಲ್ಲ. ಮೊಘಲ್ ಚಕ್ರವರ್ತಿ ಷಹಜಹಾನ್ ಅವರ ಪುತ್ರಿ ಜಹಾನಾರಾ 17ನೇ ಶತಮಾನದಲ್ಲಿ ಹಳೆ ದೆಹಲಿಯಲ್ಲಿ ಚಾಂದಿನಿ ಚೌಕ್ ಬಜಾರ್ ಸ್ಥಾಪಿಸಿದರು. ಮೊದಲು ಷಹಜಹಾನಾಬಾದ್ ಎಂದು ಕರೆಯಲಾಯಿತು. ನಂತರ ಬಜಾರ್ ಸುತ್ತಲಿನ ಸಂಪೂರ್ಣ ಪ್ರದೇಶವನ್ನು ಚಾಂದಿನಿ ಚೌಕ್ ಎಂದು ಕರೆಯಲಾಯಿತು ಎಂದು ಇತಿಹಾಸಕಾರರಾದ ಸ್ವಪ್ನಾ ಲಿಡ್ಲ್ ಹೇಳುತ್ತಾರೆ.
1857ರ ದಂಗೆಯ ನಂತರ ಬ್ರಿಟಿಷರು ಕೆಲವು ಕಟ್ಟಡಗಳನ್ನು ಕೆಡವಿದ್ದರೂ ಟೌನ್ ಹಾಲ್ ಹಾಗೂ ಘಂಟಾಘರ್ನಂತಹ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಜಹನಾರಾ ಬೇಗಂ ಸ್ವತಃ ಚಾಂದಿನಿ ಚೌಕ್ನಲ್ಲಿ ಅಂಗಡಿಗಳು ಮತ್ತು ವಿಶ್ರಾಂತಿ ಸ್ಥಳ (ಸಾರೈ) ನಿರ್ಮಿಸಲು ಆದೇಶಿಸಿದ್ದರು. ಮೊಘಲ್ ಸಾಮ್ರಾಜ್ಯದ ರಾಜಧಾನಿಯನ್ನು ಬದಲಾಯಿಸುವ ಷಹಜಹಾನ್ ಅವರ ಕನಸು 1649 ರಲ್ಲಿ ನೆರವೇರಿತು. ಅದರ 1 ವರ್ಷದ ನಂತರ ಚಾಂದಿನಿ ಚೌಕ್ ಅಸ್ತಿತ್ವಕ್ಕೆ ಬಂತು ಎಂದು ಇತಿಹಾಸಕಾರರು ವಿವರಿಸುತ್ತಾರೆ.
ಚಾಂದಿನಿ ಚೌಕ್ನ ಕೆಂಪು ಕೋಟೆಯಿಂದ ಫತೇಪುರ್ ಮಸೀದಿಗೆ ಹೋಗುವ ರಸ್ತೆ, ಒಂದು ಕಾಲದಲ್ಲಿ ಯಮುನೆಯಿಂದ ಹರಿಯುವ ಕಾಲುವೆಯನ್ನು ಹೊಂದಿತ್ತು. 1911ರಲ್ಲಿ, ಬ್ರಿಟಿಷರು ದೆಹಲಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿದಾಗ ಅದೇ ಕಾಲುವೆ ಮೂಲಕ ಓಡಾಡಲು ಪ್ರಾರಂಭಿಸಿದ್ದರು. ದೇಶ ವಿಭಜನೆಯ ನಂತರ ದೆಹಲಿಗೆ ಬಂದ ನಿರಾಶ್ರಿತರು ಇಲ್ಲಿ ಅಂಗಡಿಗಳನ್ನು ನಡೆಸಲಾರಂಭಿಸಿದರು. ಈ ಕಾರಣದಿಂದಾಗಿ ಚಾಂದಿನಿ ಚೌಕ್ ಅನ್ನು ವಸತಿ ಪ್ರದೇಶಕ್ಕಿಂತ ಹೆಚ್ಚಾಗಿ ವ್ಯಾಪಾರದ ಸ್ಥಳವಾಗಿ ಗುರುತಿಸಲಾಗಿತ್ತು.
ಕೆಂಪು ಕೋಟೆಯಿಂದ ಪ್ರಾರಂಭವಾಗುವ ಈ ಪ್ರದೇಶ, ಜೈನ ದೇವಸ್ಥಾನ, ಗೌರಿ ಶಂಕರ್ ದೇವಸ್ಥಾನ ಮತ್ತು ಗುರುದ್ವಾರ ಶೀಶ್ಗಂಜ್ ಮೂಲಕ ಫತೇಪುರಿ ಮಸೀದಿಯವರೆಗೆ ಪ್ರದೇಶವನ್ನು ಆವರಿಸಿದೆ. 1857ರ ಕ್ರಾಂತಿಯ ನಂತರದ ಬದಲಾವಣೆಗಳಿಗೆ ಸಾಕ್ಷಿಯಾದ ದೆಹಲಿಯ ಚಾಂದಿನಿ ಚೌಕ್, ಗುಲಾಮಗಿರಿಯಿಂದ ಸ್ವಾತಂತ್ರ್ಯದ ಸುವರ್ಣ ಉದಯದವರೆಗೆ ಎಲ್ಲವನ್ನೂ ನೋಡಿದೆ. ಚಾಂದಿನಿ ಚೌಕ್ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುತ್ತದೆ. ಈ ಸಾಂಸ್ಕೃತಿಕ ರತ್ನದ ಬಗ್ಗೆ ದೆಹಲಿ ಹೆಮ್ಮೆಪಡುತ್ತದೆ.
ಇದನ್ನೂ ಓದಿ: 75ನೇ ಸ್ವಾತಂತ್ರ್ಯೋತ್ಸವ: ಕ್ರಾಂತಿಕಾರಿ ಭಗತ್ ಸಿಂಗ್ ಇಡೀ ಹೋರಾಟದಲ್ಲಿ ನ್ಯಾಯಕ್ಕಾಗಿ ಹಾರಿಸಿದ್ದು ಒಂದೇ ಗುಂಡು..