ಪಾಲಕ್ಕಾಡ್ (ಕೇರಳ): ಜಾತಿ ತಾರತಮ್ಯ ನಮ್ಮಲ್ಲಿ ಇನ್ನು ಉಳಿದಿದೆ ಎನ್ನುವುದಕ್ಕೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ಉತ್ತಮ ಸಾಕ್ಷಿಯಾಗಿದೆ.
ಪಾಲಕ್ಕಾಡ್ ಜಿಲ್ಲೆಯ ಅತ್ತಪ್ಪಾಡಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೋರ್ವರು ಸಾವನ್ನಪ್ಪಿದ್ದರು. ಇವರ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿ ಶವವನ್ನು ಹೂಳಲೆಂದು ಅಲಮಾರ ಸಾರ್ವಜನಿಕ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಅಲ್ಲಿನ ಸ್ಥಳೀಯ ಗುಂಪು ಇಲ್ಲಿ ಶವವನ್ನು ಹೂಳದಂತೆ ತಡೆದು ಸ್ಮಶಾನಕ್ಕೆ ಬೀಗ ಹಾಕಿ ವಿಕೃತಿ ಮೆರೆದಿದೆ.
ಬಳಿಕ ಕುಟುಂಬಸ್ಥರು ಪೊರಂಬೋಕ್ ರುದ್ರಭೂಮಿಯಲ್ಲಿ ಮಹಿಳೆಯ ಶವ ಸಂಸ್ಕಾರ ನೆರವೇರಿಸಿದರು. ಈ ಸಂಬಂಧ ಉಮ್ಮತಂಪಾಡಿ ಕಾಲೋನಿ ನಿವಾಸಿಗಳು ಶವ ಹೂಳಲು ವಿರೋಧ ವ್ಯಕ್ತಪಡಿಸಿದವರ ವಿರುದ್ಧ ಜಾತಿ ತಾರತಮ್ಯ ಮಾಡಿದ್ದಾರೆಂದು ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದು ಸಾರ್ವಜನಿಕ ಸ್ಮಶಾನವಲ್ಲ. ಶಿವಮುಖಿ ಸ್ಮಶಾನ ಸಂಘದಿಂದ ದೇಣಿಗೆ ಸಂಗ್ರಹಿಸಿ ರುದ್ರಭೂಮಿಯನ್ನು ಖರೀದಿಸಲಾಗಿದೆ. ಈ ಕುರಿತಂತೆ ತಮ್ಮ ಬಳಿ ದಾಖಲೆಗಳಿವೆ ಎಂದು ವಿರೋಧ ವ್ಯಕ್ತಪಡಿಸಿದ ಗುಂಪು ವಾದಿಸಿದೆ.