ಲಖನೌ: ವಂಶಾಡಳಿತ ರಾಜಕೀಯವನ್ನು ವಿರೋಧಿಸುತ್ತಿರುವ ಬಿಜೆಪಿಯ ಪರಿಕಲ್ಪನೆಯೇ ಒಂದು ಭ್ರಮೆ ಎಂದು ಸಮಾಜವಾದಿ ಪಕ್ಷ ಸೇರಿರುವ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಷಿ ಅವರ ಮಗ ಮಾಯಾಂಕ್ ಜೋಷಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಟಿಕೆಟ್ ನೀಡಲು ನಿರಾಕರಿಸಿರುವ ಬಿಜೆಪಿ ಪಕ್ಷ ರಾಜನಾಥ್ ಸಿಂಗ್ ಅವರ ಮಗನಿಗೆ ಟಿಕೆಟ್ ನೀಡಿದೆ. ಅವರಿಗೆ ಯಾವ ಆಧಾರದ ಮೇಲೆ ಟಿಕೆಟ್ ನೀಡಲಾಗಿದೆ ಎಂಬುದನ್ನು ಲೆಕ್ಕಚಾರ ಹಾಕುತ್ತಿದ್ದೇನೆ. ಬಿಹಾರದ ರಾಜ್ಯಪಾಲ ಫಾಗು ಚೌಹಾಣ್ ಅವರ ಮಗನಿಗೂ ಟಿಕೆಟ್ ಸಿಕ್ಕಿದೆ. ಆದರೆ ರೀಟಾ ಬಹುಗುಣ ಜೋಷಿ ಅವರ ಮಗನಿಗೆ ಮಾತ್ರ ಟಿಕೆಟ್ ಸಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು.
13 ವರ್ಷಗಳಿಂದ ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಪಕ್ಷ ನನಗೇನೂ ಕೊಟ್ಟಿಲ್ಲ. ಯಾವ ಮನ್ನಣೆಯೂ ಸಿಕ್ಕಿಲ್ಲ. ಈಗ ಅನಿಸುತ್ತಿದೆ ಪಕ್ಷ ನನಗೆ ಏನನ್ನೂ ನೀಡದೇ ಇರುವುದೇ ಒಳ್ಳೆದಾಯಿತು. ಈಗ ಸಿಕ್ಕಿರುವ ಅವಕಾಶದ ಬಗ್ಗೆ ನನಗೆ ತೃಪ್ತಿ ಇದೆ. ಸಮಾಜವಾದಿ ಪಕ್ಷದಲ್ಲಿ ಯುವಕರಿಗೆ ಉತ್ತಮ ಭವಿಷ್ಯವಿದೆ ಎಂಬುದು ನನ್ನ ಭಾವನೆ. ಸಮಾಜವಾದಿ ಅತ್ಯಂತ ಪ್ರಗತಿಪರ ಪಕ್ಷವಾಗಿದೆ. ಇದಕ್ಕೆ ಸೇರಲು ನನಗೆ ಖುಷಿ ನೀಡಿದೆ ಎಂದರು.
ನನ್ನ ತಾಯಿ ರೀಟಾ ಬಹುಗುಣ ಜೋಷಿ ಅವರೂ ಕೂಡ ರಾಜಕೀಯ ನಿವೃತ್ತಿಯ ಅಂಚಿನಲ್ಲಿದ್ದಾರೆ. 73ರ ಹರೆಯದಲ್ಲಿದ್ದಾರೆ. ರಾಜಕೀಯದಿಂದ ಬಹುತೇಕ ನಿವೃತ್ತರಾಗಿದ್ದಾರೆ. ಈಗಾಗಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನೆನಪುಗಳನ್ನು, ಪುಸ್ತಕವನ್ನು ಬರೆಯುತ್ತೇನೆ ಎಂದಿದ್ದಾರೆ ಎಂದು ಹೇಳಿದರು.