ಕೋಲ್ಕತ್ತಾ: ನನಗೆ ಕೊರೊನಾ ಬಂದ್ರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನ ಅಪ್ಪಿಕೊಳ್ಳುವೆ ಎಂದು ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ ನಡೆದ ರ್ಯಾಲಿ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವತ್ತಾದರೂ ನನಗೆ ಕೋವಿಡ್ ಸೋಂಕು ತಗುಲಿದರೆ, ನಾನು ಮಮತಾ ಬ್ಯಾನರ್ಜಿ ಬಳಿ ಹೋಗಿ ಅವರನ್ನು ಅಪ್ಪಿಕೊಳ್ಳುವೆ. ಆಗ ಅವರಿಗೆ ಕೊರೊನಾದಿಂದಾಗಿ ತಮ್ಮ ಪ್ರೀತಿಪಾತ್ರರನ್ನು-ಆತ್ಮೀಯರನ್ನು ಕಳೆದುಕೊಂಡವರ, ಸೋಂಕಿಗೆ ಒಳಗಾದವರ ನೋವು ಅರ್ಥವಾಗುತ್ತದೆ ಎಂದಿದ್ದಾರೆ.
ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ ರ್ಯಾಲಿ ವೇಳೆ ಅನುಪಮ್ ಹಜ್ರಾ ಆಗಲಿ, ಇತರ ಬಿಜೆಪಿ ಕಾರ್ಯಕರ್ತರಾಗಲಿ ಮಾಸ್ಕ್ಗಳನ್ನ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ.
ರಾಹುಲ್ ಸಿನ್ಹಾರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ಕೈಬಿಟ್ಟ ಪಕ್ಷ ಅನುಪಮ್ ಹಜ್ರಾರನ್ನು ಇವರ ಸ್ಥಾನಕ್ಕೆ ನೇಮಕ ಮಾಡಿದೆ. ಭೋಲ್ಪುರ ಜಿಲ್ಲೆಯ ತೃಣಮೂಲ ಕಾಂಗ್ರೆಸ್ನ ಮಾಜಿ ಲೋಕಸಭಾ ಸಂಸದರಾಗಿದ್ದ ಹಜ್ರಾ ಅವರನ್ನು 'ಪಕ್ಷ ವಿರೋಧಿ' ಚಟುವಟಿಕೆಗಳಿಂದಾಗಿ ಪಕ್ಷದಿಂದ ಹೊರಹಾಕಲಾಗಿತ್ತು.