ಹೈದರಾಬಾದ್: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಟಿಎಸ್ಆರ್ಟಿಸಿ (ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ) ದ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಬರೋಬ್ಬರಿ 47 ದಿನಗಳ ಬಳಿಕ ಮುಕ್ತಾಯಗೊಂಡಿದೆ. ಬೇಡಿಕೆ ಈಡೇರಿಕೆ ಮಾಡಲು ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದ್ರೂ ತಮ್ಮ ಮುಷ್ಕರ ಕೊನೆಗೊಳಿಸುತ್ತಿರುವುದಾಗಿ ಅವರು ಘೋಷಣೆ ಮಾಡಿದ್ದಾರೆ.
ಅಕ್ಟೋಬರ್ 5ರಂದು ಟಿಎಸ್ಆರ್ಟಿಸಿ ನೌಕರರು ಸುಮಾರು 26 ಬೇಡಿಕೆ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ತಿರುಗಿಬಿದ್ದು ಪ್ರತಿಭಟನೆ ನಡೆಸುತ್ತಿದ್ದರು. ಇದರಲ್ಲಿ ಬರೋಬ್ಬರಿ 49,340ಕ್ಕೂ ಹೆಚ್ಚು ನೌಕರರು ಭಾಗಿಯಾಗಿದ್ದರು. ಇದರ ಮಧ್ಯೆ ಮಾತನಾಡಿದ್ದ ಸಿಎಂ ಚಂದ್ರಶೇಖರ್ ರಾವ್, ನವೆಂಬರ್ 5ನೇ ತಾರೀಖಿನೊಳಗೆ ಮುಷ್ಕರ ನಿಲ್ಲಿಸಿ ಕೆಲಸಕ್ಕೆ ವಾಪಸ್ಸಾಗುವಂತೆ ಮುಷ್ಕರ ನಿರತ ನೌಕರರಿಗೆ ಖಡಕ್ ಸೂಚನೆ ನೀಡಿದ್ದರು. ಆದರೆ ಇದಕ್ಕೆ ವಿರುದ್ಧವಾಗಿ ನೌಕರರು ಮುಷ್ಕರ ಮುಂದುವರಿಸಿದ್ದರಿಂದ ಸಿಎಂ 48,000ನೌಕರರನ್ನ ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದರು. ಇದಾದ ಬಳಿಕ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿತ್ತು.
ಈ ಘಟನೆ ನಡುವೆ ಟಿಎಸ್ಆರ್ಟಿಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಸ್ ಚಾಲಕ, ನಿರ್ವಾಹಕ ಸೇರಿ 7 ಜನ ಸಿಬ್ಬಂದಿ ತಮ್ಮ ಪ್ರಾಣ ಸಹ ಕಳೆದುಕೊಂಡಿದ್ದರು. ಇದೀಗ ದಿಢೀರ್ ಆಗಿ ಸಿಬ್ಬಂದಿ ತಮ್ಮ ಮುಷ್ಕರ ಹಿಂಪಡೆದುಕೊಂಡಿದ್ದು, ಕೆಲಸಕ್ಕೆ ಹಾಜರಾಗುವುದಾಗಿ ಹೇಳಿಕೊಂಡಿದ್ದಾರೆ.
ಜತೆಗೆ ತಮ್ಮ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಇಲ್ಲಿಯವರೆಗೆ ಯಾವುದೇ ರೀತಿಯ ಸ್ಪಂದನೆ ನೀಡಲ್ಲ. ನಿನ್ನೆ ಸಂಜೆ ನಡೆದ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ನಡೆದಿದ್ದು, ಇದಾದ ಬಳಿಕ ಸಿಬ್ಬಂದಿ ತಮ್ಮ ತಮ್ಮ ಕೆಲಸಗಳಿಗೆ ವಾಪಸ್ ಆಗುತ್ತಿದ್ದಾರೆ.