ಗುಮ್ಲಾ (ಜಾರ್ಖಂಡ್): ಹಲವು ವರ್ಷಗಳ ಬಳಿಕ ಭಗವಾನ್ ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ರಾಮ ದೇವಾಲಯವನ್ನು ನಿರ್ಮಿಸುವ ಕನಸು ಈಡೇರುತ್ತಿದೆ. ಶ್ರೀರಾಮ ದೇವಾಲಯ ನಿರ್ಮಾಣವಾಗುತ್ತಿರುವುದರಿಂದ ಭಾರತದಾದ್ಯಂತ ಸಂತಸದ ವಾತಾವರಣ ನಿರ್ಮಾಣವಾಗಿದೆ.
ಗುಮ್ಲಾ ಜಿಲ್ಲೆಯ ಅಂಜನಾ ಪರ್ವತದ ಮೇಲೆ ರಾಮನ ಬಂಟ ಹನುಮಂತನ ಜನ್ಮಸ್ಥಳವಿದೆ ಎಂದು ನಂಬಲಾಗಿದೆ. ಇದೀಗ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮ ದೇವಾಲಯ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತಿರುವಾಗಲೇ, ರಾಮ ಭಕ್ತ ಹನುಮನ ಜನ್ಮಸ್ಥಳವಾದ ಗುಮ್ಲಾ ಜಿಲ್ಲೆಯ ಹನುಮಾನ್ ಭಕ್ತರಲ್ಲಿ ಸಂತೋಷ ಮನೆ ಮಾಡಿದೆ.
ಗುಮ್ಲಾ ನಿವಾಸಿಗಳು ಹಾಗೂ ಬಜರಂಗದಳ ಸದಸ್ಯರು ಶ್ರೀ ರಾಮ ದೇವಾಲಯದ ಭೂಮಿ ಪೂಜೆಯಂದು ಹನುಮನ ಜನ್ಮಸ್ಥಳದಲ್ಲಿ ವಿಶೇಷ ಪ್ರಾರ್ಥನೆಗಾಗಿ ತಯಾರಿ ಆರಂಭಿಸಿದ್ದಾರೆ.
ಅಂಜನಾದೇವಿಯೊಂದಿಗಿನ ಹನುಮ ವಿಗ್ರಹ:
ಹನುಮಂತನ ಜನ್ಮಸ್ಥಳವಾದ ಅಂಜನಿ ಧಾಮ್ನಲ್ಲಿ ಶ್ರೀ ರಾಮ್ ದೇವಾಲಯದ ಭೂಮಿಪೂಜೆಯ ದಿನದಂದು ರಾಮಾಯಣ ಪಠಣ, ರಾಮಚೃತ್ಮನಸ್ ಪಠಣ, ಭಜನೆ ಕೀರ್ತನೆ ಮತ್ತು ದೀಪೋತ್ಸವವನ್ನು ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಹನುಮಾನ್ ಭಕ್ತರು ತಿಳಿಸಿದ್ದಾರೆ. ಪರ್ವತದ ಮೇಲೆ ಒಂದು ಗುಹೆ ಇದೆ. ಅಲ್ಲಿ ಮಾತಾ ಅಂಜನಿ ಬಾಲ ಹನುಮನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸದ ವಿಗ್ರಹವೂ ಇದೆ.
ಮಾತಾ ಅಂಜನಿಯಿಂದ ಹಳ್ಳಿಯ ಹೆಸರು ಅಂಜನಾ:
ಬುಡಕಟ್ಟು ಜನರ ಪ್ರಕಾರ ಮಾತಾ ಅಂಜನಿಯಿಂದಾಗಿ ಗ್ರಾಮಕ್ಕೆ ಅಂಜನಾ ಎಂದು ಹೆಸರಿಡಲಾಗಿದೆ. ಈ ಗ್ರಾಮದಲ್ಲಿ ಇಂದಿಗೂ ನೂರಾರು ಶಿವಲಿಂಗಗಳಿವೆ. ಈ ಗ್ರಾಮದ ಸುತ್ತ 360 ಕೊಳಗಳು, 360 ಶಿವಲಿಂಗಗಳು ಮತ್ತು 360 ಮಾಹುವಾ ಮರಗಳು ಇದ್ದವು ಎಂದು ಹೇಳಲಾಗುತ್ತದೆ. ಮಾತಾ ಅಂಜನಿ ನಿತ್ಯ ಕೊಳದಲ್ಲಿ ಸ್ನಾನ ಮಾಡಿ, ಮಾಹುವಾ ಮರದ ಎಲೆಗಳನ್ನು ಶಿವಲಿಂಗಕ್ಕೆ ಅರ್ಪಿಸುತ್ತಿದ್ದರು ಎಂಬ ನಂಬಿಕೆಯಿದೆ.
ತಮ್ಮನ್ನು ಹನುಮನ ವಂಶಸ್ಥರು ಎಂದು ಪರಿಗಣಿಸುವ ಸ್ಥಳೀಯ ನಿವಾಸಿಗಳು:
ಇಲ್ಲಿರುವ ಒರಾನ್ ಬುಡಕಟ್ಟು ಜನಾಂಗದವರು ತಮ್ಮನ್ನು ಹನುಮನ ವಂಶಸ್ಥರು ಎಂದು ಪರಿಗಣಿಸುತ್ತಾರೆ. ಒರಾನ್ ಜಾತಿಯವರು ಟಿಗ್ಗಾವನ್ನು ತಮ್ಮ ಗೋತ್ರದಲ್ಲಿ ಬರೆಯುತ್ತಾರೆ, ಟಿಗ್ಗ ಎಂದರೆ ವಾನರರು. ರಾಮ ರಾವಣನ ನಡುವೆ ಯುದ್ಧ ನಡೆದಾಗ, ಒರಾನ್ ಬುಡಕಟ್ಟು ಜನಾಂಗದವರು ಸೈನಿಕರಾಗಿದ್ದರು ಎಂದು ಬುಡಕಟ್ಟು ಜನಾಂಗದವರು ನಂಬುತ್ತಾರೆ.
ಅಂಜನಿಗೆ ಶಾಪ:
ಮಾತಾ ಅಂಜನಿಗೆ ಮದುವೆಯಿಲ್ಲದೆ ತಾಯಿಯಾಗುತ್ತಾರೆ ಎಂಬ ಶಾಪವಿತ್ತು. ಈ ಕಾರಣದಿಂದಾಗಿ ಅವರು ಸಮಾಜದಿಂದ ದೂರವಾಗಿ ಈ ಪರ್ವತದಲ್ಲಿ ವಾಸಿಸಲು ಪ್ರಾರಂಭಿಸಿದರು. ಹೀಗಾಗಿ ಪರ್ವತದ ಹೆಸರು ಅಂಜನಾ ಎಂದಾಗುತ್ತದೆ. ಜನಸಂಖ್ಯೆ ಹೆಚ್ಚಾದ ನಂತರ, ಈ ಗ್ರಾಮವು ಅಂಜನಾ ಗ್ರಾಮವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.