ಅಯೋಧ್ಯೆ (ಉತ್ತರ ಪ್ರದೇಶ): ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ಆಯೋಧ್ಯೆಯ ರಾಮಮಂದಿರದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಲಾಕ್ಡೌನ್ ಕೊಂಚ ಸಡಿಲಿಕೆ ನೀಡಿದ ಬಳಿಕ ಈ ಕೆಲಸ ಪುನಃ ಪ್ರಾರಂಭವಾಗಿದ್ದು, ಭೂಮಿ ಸಮತಟ್ಟು ಮಾಡುವಾಗ ಶಿವಲಿಂಗದ ವಿಶೇಷ ಅವಶೇಷಗಳು ಪತ್ತೆಯಾಗಿವೆ ಎಂದು ವಿಶ್ವ ಹಿಂದೂ ಪರಿಷತ್ನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ತಿಳಿಸಿದ್ದಾರೆ.
![Ayodhya Ram Temple](https://etvbharatimages.akamaized.net/etvbharat/prod-images/7287350_collage.jpg)
ಕಳೆದ ಎರಡು ತಿಂಗಳಿನಿಂದ ಕೊರೊನಾ ವೈರಸ್ ಪ್ರೇರಿತ ಲಾಕ್ಡೌನ್ನಿಂದಾಗಿ ರಾಮ ಮಂದಿರದ ಕಾರ್ಯ ನಿಂತು ಹೋಗಿತ್ತು. ಆದರೆ ಅಯೋಧ್ಯೆ ಕಳೆದ ವಾರವಷ್ಟೇ ಅನುಮತಿ ಪಡೆದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನಿಂದ ರಾಮಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ಪ್ರಾರಂಭವಾಗಿವೆ.
![Ayodhya Ram Temple](https://etvbharatimages.akamaized.net/etvbharat/prod-images/7287350_ollage.jpg)
ಕೊರೊನಾ ಹರಡುವಿಕೆಯ ಕಾರಣದಿಂದಾಗಿ ಈ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳಾದ ಸಾಮಾಜಿಕ ಅಂತರದೊಂದಿಗೆ ಮೂರು ಅರ್ಥ್ ಮೂವರ್ ಯಂತ್ರ, ಒಂದು ಕ್ರೇನ್, ಎರಡು ಟ್ರಾಕ್ಟರ್ಗಳು ಮತ್ತು ಹತ್ತು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೇ 11 ರಿಂದ ಈ ಸ್ಥಳದಲ್ಲಿ ಹಳೆಯ ಕೆಲಸವನ್ನು ಪುನಾರಂಭಿಸಿದ್ದು, ಹಿಂದೂ ದೇವರು ಮತ್ತು ದೇವತೆಗಳ ವಿಗ್ರಹಗಳು ಹಾಗೂ ಕೆಲವು ಪ್ರಾಚೀನ ಅವಶೇಷಗಳು ಇಲ್ಲಿ ದೊರೆತಿವೆ ಎಂದು ವಿನೋದ್ ಬನ್ಸಾಲ್ ಹೇಳಿದ್ದಾರೆ.
![Ayodhya Ram Temple](https://etvbharatimages.akamaized.net/etvbharat/prod-images/7287350_aaaa.jpg)
ಪುರಾತನ ಹೂವಿನ ಹೂದಾನಿ, ಕಮಾನಿನ ಕಲ್ಲುಗಳು, ಕಪ್ಪು ಸ್ಪರ್ಶ ಕಲ್ಲಿನಿಂದ ಮಾಡಿದ ಏಳು ಸ್ತಂಭಗಳು, ಕೆಂಪು ಕಲ್ಲಿನ ಆರು ಕಂಬಗಳು ಮತ್ತು ಐದು ಅಡಿ ಎತ್ತರದ ಕೆತ್ತಿದ ಶಿವಲಿಂಗ ಈಗಾಗಲೇ ಈ ಸ್ಥಳದಲ್ಲಿ ನಮಗೆ ದೊರೆತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದಲ್ಲದೆ, ಮರಳುಗಲ್ಲಿನ ಕೆತ್ತನೆಗಳು, ಕಂಬಗಳು ಹಾಗೂ ಶಿವಲಿಂಗ ಸಹ ಈ ಸ್ಥಳದಲ್ಲಿ ಕಂಡುಬಂದಿವೆ ಎಂದು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದರು.
![Ayodhya Ram Temple](https://etvbharatimages.akamaized.net/etvbharat/prod-images/7287350_aa.jpg)
ಈ ಹಿಂದೆ ಹೈಕೋರ್ಟ್ನ ನೀಡಿದ ನಿರ್ದೇಶನದ ಮೇರೆಗೆ ಸ್ಥಳದಲ್ಲಿ ಹೂಳೆತ್ತುವ ಕೆಲಸ ನಡೆಸಿದಾಗ ಅಂತಹ ಅವಶೇಷಗಳು ದೊರೆತಿವೆ. ಈಗ ಕೆಲಸ ಪುನಾರಂಭಗೊಂಡಿದ್ದು, ಇನ್ನಷ್ಟು ವಸ್ತುಗಳನ್ನು ಹುಡುಕಲಾಗುತ್ತಿದೆ ಹಾಗೂ ಎಲ್ಲಾ ಕಲಾಕೃತಿಗಳನ್ನು ಜಾಗ್ರತೆಯಿಂದ ಸಂರಕ್ಷಿಸಲಾಗುತ್ತಿದೆ ಎಂದು ಬನ್ಸಾಲ್ ಹೇಳಿದ್ದಾರೆ.