ಮುಂಬೈ (ಮಹಾರಾಷ್ಟ್ರ): ಸಾಧು ಸಂತರು ಹಾಗೂ ಅರ್ಚಕರನ್ನು ದೇಶದ ಹಲವೆಡೆ ಕೊಲ್ಲಲಾಗುತ್ತಿದ್ದು, ಹಲ್ಲೆಗಳೂ ಜರುಗುತ್ತಿವೆ. ಆದರೂ ಇಂತಹ ಘಟನೆಗಳನ್ನು ಏಕೆ ನಿರ್ಲಕ್ಷಿಸಲಾಗುತ್ತಿದೆ? ಎಂದು ಶಿವಸೇನೆ ಪ್ರಶ್ನೆ ಮಾಡಿದೆ.
ಶಿವಸೇನೆ ತನ್ನ ಮುಖವಾಣಿಯಾದ ಸಾಮ್ನಾದಲ್ಲಿ ಪಕ್ಷದ ನಾಯಕ ಸಂಜಯ್ ರಾವತ್ ಈ ರೀತಿಯಾಗಿ ಪ್ರಶ್ನೆ ಮಾಡಿದ್ದು, ಪಾಲ್ಘರ್ನಲ್ಲಿ ಇಬ್ಬರು ಸಾಧುಗಳನ್ನು ಹತ್ಯೆ ಮಾಡಲಾಗಿದ್ದು, ಇದು ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಾಲ್ಕು ಸಾಧುಗಳನ್ನು ಹಾಗೂ ರಾಜಸ್ಥಾನದಲ್ಲಿ ಓರ್ವ ಸಾಧುವನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ. ಪಾಲ್ಘರ್ನಲ್ಲಿ ನಡೆದ ವೇಳೆ ಇದ್ದ ಮಾಧ್ಯಮಗಳ ಆಕ್ರೋಶ, ಬೇರೆ ಸ್ಥಳಗಳಲ್ಲಿ ನಡೆದ ಘಟನೆಗಳ ವೇಳೆ ಏಕೆ ಇಲ್ಲ.? ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದ ಪಾಲ್ಘರ್ನಲ್ಲಿ ನಡೆದಾಗ ರಾಷ್ಟ್ರವ್ಯಾಪಿಯಾಗಿ ಸುದ್ದಿ ಹರಡಲಿದ್ದು, ಉತ್ತರ ಪ್ರದೇಶದಲ್ಲಿ ಹಾಗೂ ಇತರ ಪ್ರದೇಶಗಳಲ್ಲಿ ನಡೆದಾಗ ಏಕೆ ಕೇವಲ ಒಂದು ಸಣ್ಣ ಘಟನೆಯಾಗಿ ಉಳಿದುಕೊಳ್ಳುತ್ತದೆ ಎಂದು ಪರೋಕ್ಷವಾಗಿ ಯೋಗಿ ಸರ್ಕಾರದ ವಿರುದ್ಧ ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಧುಗಳನ್ನು ರಕ್ಷಣೆ ಮಾಡಲು ಹಾಗೂ ತಪ್ಪು ಮಾಡಿದವರನ್ನು ನಾಶ ಮಾಡಲು ದೇವರೆಲ್ಲಿರುತ್ತಾನೆ..? ಎಂದು ರಾವತ್ ಪ್ರಶ್ನಿಸಿದ್ದಾರೆ. ಪ್ರಸ್ತುತ ಆಡಳಿತ ಮಾಡುತ್ತಿರುವವರು ಮೋದಿ ಹಾಗೂ ಅಮಿತ್ ಶಾ ಕೃಷ್ಣ ಹಾಗೂ ಅರ್ಜುನನ ಪಾತ್ರ ವಹಿಸುತ್ತಿದ್ದಾರೆ. ಇವರು ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡಬೇಕು. ಇದರ ಜೊತೆಗೆ ಧರ್ಮದ ರಕ್ಷಕರಾಗಿ ದೇಶವನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ರಾವತ್ ಪತ್ರಿಕೆಯ ಸಂಪಾದಕೀಯದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಅಕ್ಟೋಬರ್ 11ರಂದು ಉತ್ತರ ಪ್ರದೇಶದ ಗೊಂಡಾ ಪೊಲೀಸ್ ಠಾಣಾ ವ್ಯಾಪಿಯ ಇಟಿಯಾ ತೋಕ್ ಎಂಬಲ್ಲಿ ದೇವಾಲಯದ ಅರ್ಚಕನೊಬ್ಬನನ್ನು ಕೊಲೆ ಮಾಡಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೇವಾಲಯದ ಅರ್ಚಕನನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿತ್ತು.