ಮುಂಬೈ: ಕಳೆದ ಎರಡು ವಾರಗಳಿಂದ ಮಹಾರಾಷ್ಟ್ರದಲ್ಲಿ ಉಂಟಾಗಿದ್ದ ರಾಜಕೀಯ ದೊಂಬರಾಟಕ್ಕೆ ಇದೀಗ ರಾಷ್ಟ್ರಪತಿ ಆಳ್ವಿಕೆ ಮೂಲಕ ತೆರೆ ಎಳೆಯಲಾಗಿದ್ದು, ಮುಖ್ಯಮಂತ್ರಿ ಖುರ್ಚಿ ಮೇಲೆ ಕುಳಿತುಕೊಳ್ಳುವ ಕನಸು ಕಾಣುತ್ತಿದ್ದ ಶಿವಸೇನೆಗೆ ಮುಖಭಂಗವಾಗಿದೆ.
288 ಕ್ಷೇತ್ರಗಳ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಎನ್ಸಿಪಿ 54 ಹಾಗೂ ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ ಮತ್ತೊಂದು ಅವಧಿಗೆ ರಾಜ್ಯದಲ್ಲಿ ಬಿಜೆಪಿ + ಶಿವಸೇನೆ ಮೈತ್ರಿ ಸರ್ಕಾರ ರಚನೆ ಮಾಡುವುದು ಕನ್ಫರ್ಮ್ ಎಂದು ಹೇಳಲಾಗಿತ್ತು. ಆದರೆ, ಇದೇ ವೇಳೆ ಬಿಜೆಪಿ ಜತೆ ಗುದ್ದಾಟಕ್ಕಿಳಿದ ಶಿವಸೇನೆ 50: 50 ಸೂತ್ರದ ಮೊರೆ ಹೋಗಿತ್ತು. ಜತೆಗೆ 2.5 ವರ್ಷಗಳ ಕಾಲ ಸಿಎಂ ಸ್ಥಾನ ತನಗೆ ನೀಡಲೇಬೇಕು ಎಂದು ಪಟ್ಟು ಹಿಡಿದು ಕುಳಿತಿತ್ತು.
ಆದರೆ, ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಎರಡು ಪಕ್ಷಗಳ ನಡುವೆ ಅಸಮಾಧಾನ ಭುಗಿಲೆದ್ದಿತು. ಇದೇ ವೇಳೆ, ರಾಜ್ಯಪಾಲರು ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿದ್ದ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಆಹ್ವಾನ ನೀಡಿದ್ದರು. ಆದರೆ ತನ್ನ ಬಳಿ 145 ಮ್ಯಾಜಿಕ್ ನಂಬರ್ ಇಲ್ಲದ ಕಾರಣ ಕಮಲ ಪಾಳಯ ಸರ್ಕಾರ ರಚನೆ ಮಾಡಲು ಮುಂದಾಗಲಿಲ್ಲ. ಇದಾದ ಬಳಿಕ ಎರಡನೇ ಅತಿದೊಡ್ಡ ಪಕ್ಷ ಶಿವಸೇನೆಗೆ ಗವರ್ನರ್ ಆಹ್ವಾನ ನೀಡಿದ್ದರು. ಈ ವೇಳೆ ಎನ್ಸಿಪಿ + ಕಾಂಗ್ರೆಸ್ ಜತೆ ಮಾತುಕತೆ ನಡೆಸಿದ ಉದ್ಧವ್ ಠಾಕ್ರೆ ಸರ್ಕಾರ ರಚನೆಗೆ 48ಗಂಟೆ ಹೆಚ್ಚುವರಿ ಸಮಯ ಕೇಳಿದ್ದರು. ಈ ಮನವಿಯನ್ನ ರಾಜ್ಯಪಾಲರು ತಳ್ಳಿ ಹಾಕಿ, ಮೂರನೇ ಅತಿದೊಡ್ಡಪಕ್ಷ ಎನ್ಸಿಪಿಗೆ ಆಹ್ವಾನ ನೀಡಿದ್ದರು. ಇಂದು ರಾತ್ರಿ ಎಂಟು ಗಂಟೆಯೊಳಗೆ ತಮಗಿರುವ ಬಹುಮತದ ಬಗ್ಗೆ ಪತ್ರ ನೀಡುವಂತೆ ಸೂಚಿಸಿದ್ದರು. ಆದರೆ ಎನ್ಸಿಪಿ- ಶಿವಸೇನೆಗೆ ಕಾಂಗ್ರೆಸ್ ಬೆಂಬಲ ನೀಡುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸಿತ್ತು. ಇನ್ನೊಂದು ಕಡೆ ರಾಜ್ಯಪಾಲರು ತಾವು ಕೊಟ್ಟ ಅವಧಿಗೆ ಮೊದಲೇ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆ.
ಈಗಾಗಲೇ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ರಾಷ್ಟ್ರಪತಿ ಆಳ್ವಿಕೆಗೆ ರಾಮನಾಥ್ ಕೋವಿಂದ್ ಸಹಿ ಸಹ ಮಾಡಿದ್ದರಿಂದ ಇದೀಗ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಧಿಕೃತವಾಗಿ ಶುರುವಾಗಿದೆ.
ರಾಷ್ಟ್ರಪತಿ ಆಳ್ವಿಕೆ
ಕಳೆದ 19 ದಿನಗಳಿಂದ ಯಾವುದೇ ಪಕ್ಷ ಸರ್ಕಾರ ರಚನೆ ಮಾಡಲು ಮುಂದಾಗದ ಕಾರಣ ಮಹಾರಾಷ್ಟ್ರದಲ್ಲಿ ಸಂವಿಧಾನದ 356ನೇ ವಿಧಿ ಪ್ರಕಾರ ಇಂದಿನಿಂದ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ರಾಷ್ಟ್ರಪತಿ ಆಳ್ವಿಕೆ ಒಮ್ಮೆ ಜಾರಿಯಾದರೆ ಆರು ತಿಂಗಳವರೆಗೂ ಮುಂದುವರೆಯುತ್ತದೆ. ಗರಿಷ್ಠ ಮೂರು ವರ್ಷಗಳ ಅವಧಿವರೆಗೂ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಯಲ್ಲಿಡಬಹುದು. ಆದರೆ, ಈ ಅವಧಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಸಂಸತ್ತಿನ ಒಪ್ಪಿಗೆ ಪಡೆಯಬೇಕಾಗುತ್ತದೆ.
ಸುಪ್ರೀಂ ಮೆಟ್ಟಿಲೇರಿದ ಸೇನೆ!
ಸರ್ಕಾರ ರಚನೆ ಮಾಡಲು 48 ಗಂಟೆ ಹೆಚ್ಚುವರಿ ಸಮಯ ನೀಡುವಂತೆ ಶಿವಸೇನೆ ಗವರ್ನರ್ ಬಳಿ ಮನವಿ ಮಾಡಿತ್ತು. ಆದರೆ, ಇದಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸದ ಕಾರಣ, ಇದೇ ವಿಷಯವನ್ನಿಟ್ಟುಕೊಂಡು ಸುಪ್ರೀಂಕೋರ್ಟ್ನಲ್ಲಿ ವಾದ ಮಂಡನೆ ಮಾಡಲಿದೆ.
ಎನ್ಸಿಪಿ-ಕಾಂಗ್ರೆಸ್ ಮಾತುಕತೆ
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದ್ದರೂ ಇದೀಗ ಎನ್ಸಿಪಿ+ ಕಾಂಗ್ರೆಸ್ ಬಿರುಸಿನ ಚಟುವಟಿಕೆ ನಡೆಸಿದ್ದು, ಶರದ್ ಪವಾರ್ ಜತೆ ಕಾಂಗ್ರೆಸ್ನ ಮಲ್ಲಿಕಾರ್ಜುನ್ ಖರ್ಗೆ. ಅಹ್ಮದ್ ಪಟೇಲ್ ಮಾತುಕತೆಯಲ್ಲಿ ಭಾಗಿಯಾಗಿದ್ದಾರೆ.
ಪಕ್ಷಗಳ ಮುಂದಿನ ನಡೆ ಏನು!?
ರಾಷ್ಟ್ರಪತಿ ಆಳ್ವಿಕೆ ಇದೀಗ ಆರು ತಿಂಗಳವರೆಗೆ ಮುಂದುವರೆಯಲಿದೆ. ಈ ಅವಧಿಯಲ್ಲಿ ಯಾವುದೇ ಪಕ್ಷಗಳು ಸರ್ಕಾರ ರಚನೆಗೆ ಬೇಕಾಗಿರುವ ಸಂಖ್ಯಾಬಲದೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಬೇಕು. ಬಳಿಕ ಸದನದಲ್ಲಿ ಬಹುಮತ ಸಾಬೀತು ಪಡಿಸಿದಾಗ ರಾಷ್ಟ್ರಪತಿ ಆಳ್ವಿಕೆ ರದ್ದಾಗುತ್ತದೆ.
ಮತ್ತೊಮ್ಮೆ ಮಹಾ ಚುನಾವಣೆ!?
ಒಂದು ವೇಳೆ ಆರು ತಿಂಗಳೊಳಗೆ ಯಾವುದೇ ಪಕ್ಷ ಸರ್ಕಾರ ರಚಿಸಲು ಸಾಧ್ಯವಾಗದಿದ್ದಲ್ಲಿ ಚುನಾವಣಾ ಆಯೋಗ ವಿಧಾನಸಭೆಗೆ ಮತ್ತೊಮ್ಮೆ ಚುನಾವಣೆ ನಡೆಸುತ್ತದೆ.