ನವದೆಹಲಿ : ಕೋವಿಡ್ ನಿಯಂತ್ರಿಸುವಲ್ಲಿ ಪಶ್ಮಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಸಹಕರಿಸಲು ಲಾಕ್ ಡೌನ್ ಉಲ್ಲಂಘಿಸಿ ಸರಕು ಸಾಗಾಟ ವಿಮಾನದಲ್ಲಿ ಕೊಲ್ಕತ್ತಾಗೆ ತೆರಳಿದ್ದಾರೆ ಎಂಬ ಆರೋಪವನ್ನು ರಾಜಕೀಯ ತಂತ್ರಜ್ಞ ಮತ್ತು ಮಾಜಿ ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ನಿರಾಕರಿಸಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಅನಗತ್ಯವಾಗಿ ಆಧಾರರಹಿತ ಆರೋಪಗಳನ್ನು ನನ್ನ ಮೇಲೆ ಹೊರಿಸಲಾಗುತ್ತಿದೆ. ನಾನು ಕೊಲ್ಕತ್ತಾಗೆ ಹೋಗಿಲ್ಲ ಮತ್ತು ಯಾವುದೇ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಲಿ ಎಂದಿದ್ದಾರೆ.
ಇಂಟರ್ ಮಿನಿಸ್ಟ್ರಿಯಲ್ ಕೇಂದ್ರ ತಂಡ ( ಐಎಂಸಿಟಿ) ದ ಕಾರ್ಯಾಚರಣೆ ವಿರುದ್ಧ ಪ್ರತಿ ಕಾರ್ಯತಂತ್ರ ಹೆಣೆಯಲು ಸಿಎಂ ಮಮತಾ ಬ್ಯಾನರ್ಜಿ ಆಹ್ವಾನದ ಮೇರೆಗೆ ಪ್ರಶಾಂತ್ ಕಿಶೋರ್ ಕೊಲ್ಕತ್ತಾಗೆ ತೆರಳಿದ್ದರು ಎಂಬ ಸುದ್ದಿಗಳು ಹೊರಬಂದ ಬಳಿಕ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಪ್ರಶಾಂತ್ ಕಿಶೋರ್ ನವದೆಹಲಿಯಿಂದ ಕೋಲ್ಕತ್ತಾಗೆ ಸರಕು ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂಬ ಆರೋಪದ ಬಗ್ಗೆ ಕೇಂದ್ರವು ತನಿಖೆ ಆರಂಭಿಸಿದೆ.