ಬೆಂಗಳೂರು: ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ವೇಳೆ ಚಂದ್ರಯಾನ -2 ವಿಕ್ರಂ ಲ್ಯಾಂಡರ್ ಇಸ್ರೋದ ನಿಯಂತ್ರಣ ಕಳೆದುಕೊಂಡಿದೆ. ಆ ಬಳಿಕ ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ನರೇಂದ್ರ ಮೋದಿ, ವಿಜ್ಞಾನದಲ್ಲಿ ವಿಫಲತೆ ಎಂಬುದಿಲ್ಲ. ಕೇವಲ ಪ್ರಯೋಗ ಮತ್ತು ಪ್ರಯತ್ನಗಳಿವೆ ಎಂದು ಹೇಳುತ್ತಾ ವಿಜ್ಞಾನಿಗಳನ್ನು ಹುರಿದುಂಬಿಸಿದ್ದಾರೆ.
ಇಸ್ರೋ ಬೆನ್ನು ತಟ್ಟಿರುವ ಮೋದಿ, ಇಡೀ ದೇಶವೇ ನಿಮ್ಮೊಂದಿಗಿದೆ ಎಂದು ಹೇಳುವ ಮೂಲಕ ವಿಜ್ಞಾನಿಗಳಿಗೆ ಮಾನಿಸಿಕ ಸ್ಥೈರ್ಯ ತುಂಬಿದ್ರು. ನಾವು ಯಶಸ್ಸಿನ ಹೊಸ ಎತ್ತರಗಳನ್ನು ತಲುಪುತ್ತೇವೆ. ಭಾರತ ನಿಮ್ಮೊಂದಿಗಿದೆ. ನೀವು ರಾಷ್ಟ್ರದ ಪ್ರಗತಿಗೆ ಅಪಾರ ಕೊಡುಗೆ ನೀಡಿದ ಅಸಾಧಾರಣರು ಎಂದು ಶ್ಲಾಘಿಸಿದರು.
ನಮ್ಮ ಸುಪ್ರಸಿದ್ಧ ಇತಿಹಾಸದಲ್ಲಿ, ನಮ್ಮನ್ನು ನಿಧಾನಗೊಳಿಸಿದ ಕ್ಷಣಗಳನ್ನು ನಾವು ಎದುರಿಸಿದ್ದೇವೆ. ಆದರೆ ಅವು ಎಂದಿಗೂ ನಮ್ಮ ಸ್ಫೂರ್ತಿ ಕುಂದಿಸಲಿಲ್ಲ. ನಾವು ಮತ್ತೆ ಪುಟಿದೇಳುವೆವು. ನಮ್ಮ ದೇಶದ ನಾಗರಿಕತೆ ಇದೇ ಕಾರಣದಿಂದ ಎತ್ತರದ ಸ್ಥಾನದಲ್ಲಿದೆ ಎಂಬ ಸ್ಫೂರ್ತಿಯ ಮಾತುಗಳನ್ನಾಡಿದ್ರು.
ನಾನು ಹೆಮ್ಮೆಯಿಂದ ಹೇಳುತ್ತೇನೆ, ನಮ್ಮ ಪ್ರಯತ್ನ ಪ್ರಾಮಾಣಿಕವಾಗಿದೆ. ನಮ್ಮ ವಿಜ್ಞಾನಿಗಳು ಶ್ರಮಿಸಿದ್ದಾರೆ, ನಮಗೆ ಇದೊಂದು ಪಾಠವಿದ್ದಂತೆ ಎಂದು ಕಿವಿಮಾತು ಹೇಳಿದ್ರು.