ಹೈದರಾಬಾದ್ (ಬ್ಯುಸಿನೆಸ್ ಡೆಸ್ಕ್): ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಈರುಳ್ಳಿ, ಆಲೂಗಡ್ಡೆ, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಕಾಳು ಮತ್ತು ಖಾದ್ಯ ತೈಲಗಳನ್ನ ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ಅಗತ್ಯ ಸರಕುಗಳ ಕಾನೂನು ತಿದ್ದುಪಡಿ ಮಸೂದೆ 2020 ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. ಲೋಕಸಭೆಯಲ್ಲಿ ಸೆಪ್ಟೆಂಬರ್ 15ರಂದು ಅಂಗೀಕಾರಗೊಂಡಿದ್ದ ಈ ಮಸೂದೆಯನ್ನ ಧ್ವನಿಮತದ ಮೂಲಕ ಇಂದು ಅಂಗೀಕರಿಸಲಾಗಿದೆ. ಖಾಸಗಿ ಹೂಡಿಕೆದಾರರು ವ್ಯವಹಾರದಲ್ಲಿ ಅತಿಯಾದ ಹಸ್ತಕ್ಷೇಪ ಭಯ ತೆಗೆದು ಹಾಕುವ ಉದ್ದೇಶದಿಂದ ಈ ಮಸೂದೆ ಜಾರಿಗೊಳಿಸಲಾಗಿದೆ.
ರೈತರು, ಗ್ರಾಹಕರು - ಮಧ್ಯಸ್ಥಗಾರರ ಮೇಲೆ ಹೇಗೆ ಪರಿಣಾಮ!?
ಈ ಮಸೂದೆಯಿಂದ ಸಿರಿಧಾನ್ಯ, ಆಹಾರಕಾಳು, ಈರುಳ್ಳಿ, ಅಲೂಗಡ್ಡೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಮೇಲಿನ ನಿಯಂತ್ರಣ ತೆಗೆದುಹಾಕಲಾಗುತ್ತದೆ. ಕೃಷಿ ಕ್ಷೇತ್ರದ ಸುಧಾರಣೆ ಹಾಗೂ ರೈತರ ಆದಾಯ ಹೆಚ್ಚಿಸುವ ಗುರಿ ಹೊಂದಲಾಗಿದೆ. ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆದುಕೊಳ್ಳಲು ಸಹಕಾರಿಯಾಗಲಿದೆ.
ಇದೀಗ ಈ ಮಸೂದೆಯಲ್ಲಿ ತಿದ್ದುಪಡಿಯಾಗಿದ್ದು, ಈರುಳ್ಳಿ, ಆಲೂಗಡ್ಡೆ, ಸಿರಿಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಖಾದ್ಯ ತೈಲಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇಷ್ಟುದಿನ ಸರಬರಾಜು ವ್ಯಕ್ತಿಗಳು/ಸಗಟು ವ್ಯಾಪಾರಿಗಳು ಸಂಗ್ರಹಿಸಬಹುದಾದ ಪ್ರಮಾಣದ ಮಿತಿ ಮೇಲೆ ನಿಯಂತ್ರಣ ಹೇರಿಕೆ ಮಾಡಬಹುದಿತ್ತು. ಆದರೆ ಇದೀಗ ಸರಕುಗಳು ಉತ್ಪಾದನೆ ಮಾಡಲು, ಹಿಡಿದಿಡಲು, ವಿತರಿಸಲು ಮತ್ತು ಪೂರೈಕೆ ಮಾಡಲು ಸಂಪೂರ್ಣ ಸ್ವಾತಂತ್ರ್ಯವಿದೆ.
ಈ ಮಸೂದೆ ಗ್ರಾಹಕರ ಹಿತಾಸಕ್ತಿ ಕಾಪಾಡುತ್ತದೆ ಎಂಬುದು ಸರ್ಕಾರದ ಇರಾದೆಯಾಗಿದೆ. ಯುದ್ಧ, ನೈಸರ್ಗಿಕ ವಿಪತ್ತಿನಂತಹ ಸಂದರ್ಭಗಳಲ್ಲಿ ಕೃಷಿ ಆಹಾರ ಪದಾರ್ಥಗಳನ್ನ ನಿಯಂತ್ರಿಸಬಹುದಾಗಿದೆ.