ಜೈಪುರ: ಕೊರೊನಾ ವೈರಸ್ ರೋಗಿಗಳ ಮೇಲೆ ಪತಂಜಲಿ ಆಯುರ್ವೇದ ಔಷಧ ಕೊರೊನಿಲ್ ಪ್ರಯೋಗಗಳನ್ನು ನಡೆಸಿದ ಬಗ್ಗೆ ವಿವರಣೆ ಕೋರಿ ರಾಜಸ್ಥಾನದ ಆರೋಗ್ಯ ಇಲಾಖೆ ನಿಮ್ಸ್ ಆಸ್ಪತ್ರೆಗೆ ನೋಟಿಸ್ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ನಾವು ಮೂರು ದಿನಗಳಲ್ಲಿ ವಿವರಣೆಯನ್ನು ಕೋರಿ ಬುಧವಾರ ಸಂಜೆ ಆಸ್ಪತ್ರೆಗೆ ನೋಟಿಸ್ ನೀಡಿದ್ದೇವೆ. ಆಸ್ಪತ್ರೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿಲ್ಲ ಅಥವಾ ಅನುಮತಿ ಕೋರಿಲ್ಲ' ಎಂದು ಜೈಪುರದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ನಾರೋಟಂ ಶರ್ಮಾ ತಿಳಿಸಿದ್ದಾರೆ.
ಜೈಪುರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ನಿಮ್ಸ್) ನಿಂದ ಉತ್ತರವನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಯೋಗ ಗುರು ರಾಮದೇವ್ ಅವರು ಮಂಗಳವಾರ ಕೊರೊನಾ ಸೋಂಕಿಗೆ ಔಷಧಿಯನ್ನು ಬಿಡುಗಡೆ ಮಾಡಿದ್ದು ಚರ್ಚೆಯೊಂದನ್ನು ಹುಟ್ಟುಹಾಕಿತು. ನಂತರ ಆಯುಷ್ ಸಚಿವಾಲಯವು ಈ ಬಗ್ಗೆ ಮಾಹಿತಿ ಕೋರಿ, ಕೊರೊನಾ ವೈರಸ್ ಅನ್ನು ಗುಣಪಡಿಸುವ ಔಷಧಿಯೆಂದು ಜಾಹೀರಾತು ನೀಡುವುದನ್ನು ನಿಷೇಧಿಸಿತು.
ಆಯುಷ್ ಸಚಿವಾಲಯದ ಅನುಮತಿಯಿಲ್ಲದೆ ರಾಜ್ಯದಲ್ಲಿ ಯಾವುದೇ ಡ್ರಗ್ ಅನ್ನು ಔಷಧಿಯಾಗಿ ಬಳಸಲಾಗುವುದಿಲ್ಲ ಎಂದು ರಾಜಸ್ಥಾನ ಸರ್ಕಾರ ಸ್ಪಷ್ಟಪಡಿಸಿದೆ. ಕೊರೊನಾ ವೈರಸ್ ಸೋಂಕಿಗೆ ಚಿಕಿತ್ಸೆ ನೀಡಲು ಯಾವುದೇ ಡ್ರಗ್ ಅನ್ನು ಔಷಧಿಯಾಗಿ ಮಾರಾಟ ಮಾಡಿದರೆ ನಿಯಮಗಳ ಪ್ರಕಾರ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ರಘು ಶರ್ಮಾ ಹೇಳಿದ್ದಾರೆ.