ನವದೆಹಲಿ: ಎಲ್ಲ ವಯೋಮಾನದ ಮಹಿಳೆಯರಿಗೆ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕೆ ಅವಕಾಶ ನೀಡಬೇಕೆನ್ನುವ ಸುಪ್ರೀಂಕೋರ್ಟ್ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಇಂದಿನಿಂದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದಲ್ಲಿ 9 ನ್ಯಾಯಮೂರ್ತಿಗಳನ್ನೊಳಗೊಂಡ ಪೀಠವು ನಡೆಸಲಿದೆ.
ಆದರೆ, ಈ ಹಿಂದೆ ಶಬರಿಮಲೆಗೆ ಮಹಿಳೆಯರ ಪ್ರವೇಶದ ಪರವಾಗಿದ್ದ ನ್ಯಾ. ಆರ್.ಎಫ್.ನಾರಿಮನ್ ಮತ್ತು ಡಿ.ವೈ.ಚಂದ್ರಚೂಡ್, ಹಾಗೂ ಇದನ್ನು ವಿರೋಧಿಸಿದ್ದ ಮಹಿಳಾ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಕೂಡ ಈ ಪೀಠದಲ್ಲಿ ಇಲ್ಲ.
ಶಬರಿಮಲೈ ದೇವಸ್ಥಾನ ಪ್ರವೇಶ ವಿಚಾರ ಸಂಬಂಧ 2018ರ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ 60 ಅರ್ಜಿಗಳು ಬಂದಿದ್ದವು. ಇಂದು ಸಿಜೆಐ ನೇತೃತ್ವದಲ್ಲಿ ಈ ಅರ್ಜಿಗಳನ್ನು ನ್ಯಾ. ಆರ್ ಭಾನುಮತಿ, ಎಲ್ ನಾಗೇಶ್ವರ ರಾವ್, ಅಶೋಕ್ ಭೂಷಣ್, ಮೋಹನ್ ಎಂ ಶಾಂತನಗೌಡರ್, ಎಸ್ ಅಬ್ದುಲ್ ನಜೀರ್, ಆರ್ ಸುಭಾಷ್ ರೆಡ್ಡಿ, ಬಿ ಆರ್ ಗವಾಯಿ ಹಾಗೂ ಸೂರ್ಯ ಕಾಂತ್ ಇರುವ ಸಾಂವಿಧಾನಿಕ ಪೀಠ ನಡೆಸಲಿದೆ. ಇದರ ಜೊತೆಗೆ ಮುಸ್ಲಿಂ ಹಾಗೂ ಪಾರ್ಸಿ ಮಹಿಳೆಯರ ವಿರುದ್ಧ ತಾರತಮ್ಯ ಸೇರಿದಂತೆ ಇತರ ವಿವಾದಾತ್ಮಕ ವಿಷಯಗಳ ವಿಚಾರಣೆ ಕೂಡ ನಡೆಯಲಿದೆ.