ನವದೆಹಲಿ: 'ಕಿಸಾನ್ ಸೂರ್ಯೋದಯ' ಸೇರಿದಂತೆ ಗುಜರಾತ್ನ ಮೂರು ಪ್ರಮುಖ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಚಾಲನೆ ನೀಡಿದರು.
ಗುಜರಾತ್ ರಾಜ್ಯದ ರೈತರಿಗಾಗಿ ಕಿಸಾನ್ ಸೂರ್ಯೋದಯ ಯೋಜನೆ, ಯು.ಎನ್ ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆ್ಯಂಡ್ ರಿಸರ್ಚ್ ಸೆಂಟರ್ ಅಡಿಯಲ್ಲಿ ಬರುವ ಮಕ್ಕಳ ಹೃದ್ರೋಗ ಆಸ್ಪತ್ರೆ (Paediatric Heart Hospital) ಹಾಗೂ ಗಿರ್ನಾರ್ನ ರೋಪ್ವೇಗೆ ಪಿಎಂ ಮೋದಿ ಉದ್ಘಾಟಿಸಿದರು.
ಕಿಸಾನ್ ಸೂರ್ಯೋದಯ ಯೋಜನೆ
ಕಿಸಾನ್ ಸೂರ್ಯೋದಯ ಯೋಜನೆಯಡಿಯಲ್ಲಿ ಸೋಲಾರ್ ಪಂಪಗಳನ್ನು ಅಳವಡಿಸಿ ರೈತರಿಗೆ ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯ ರವರೆಗೆ ನೀರಾವರಿಗಾಗಿ ವಿದ್ಯುತ್ ಪೂರೈಕೆ ಮಾಡಲಾಗುವುದು. ಇದಕ್ಕಾಗಿ ಗುಜರಾತ್ ಸರ್ಕಾರವು 3,23 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
"70.5 ಲಕ್ಷ ರೈತ ಕುಟುಂಬಗಳಿಗೆ ಸೋಲಾರ್ ಪಂಪಗಳ ಅಳವಡಿಸಲು ನೆರವು ನೀಡಲಾಗುವುದು. ಇವು ರೈತರಿಗೆ ನೀರಾವರಿಗೆ ಮಾತ್ರವಲ್ಲ ಹೆಚ್ಚುವರಿ ಆದಾಯಕ್ಕೆ ಸಹಾಯ ಮಾಡುತ್ತದೆ" ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಹೇಳಿದರು.
"ಇಂದು ಸೌರಶಕ್ತಿ ಉತ್ಪಾದನೆ ಮತ್ತು ಬಳಕೆ ಎರಡರಲ್ಲೂ ಭಾರತವು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಕಳೆದ 6 ವರ್ಷಗಳಲ್ಲಿ ಸೌರ ಉತ್ಪಾದನೆಯ ವಿಷಯದಲ್ಲಿ ದೇಶವು ವಿಶ್ವದಲ್ಲೆ ಐದನೇ ಸ್ಥಾನವನ್ನು ಪಡೆದಿದೆ. ವಿದ್ಯುತ್ ಜೊತೆಗೆ ನೀರಾವರಿ ಮತ್ತು ಕುಡಿಯುವ ನೀರಿನ ವಿಚಾರದಲ್ಲಿ ಗುಜರಾತ್ ಉತ್ತಮ ಕೆಲಸ ಮಾಡಿದೆ ಎಂದು ಮೋದಿ ತಿಳಿಸಿದರು.
ಪ್ರಸ್ತುತ ದಾಹೋಡ್, ಪಟಾನ್, ಮಹಿಸಾಗರ್, ಪಂಚಮಹಲ್, ಛೋಟಾ ಉದೆಪುರ, ಖೇಡಾ, ತಾಪಿ, ವಲ್ಸಾದ್, ಆನಂದ್ ಮತ್ತು ಗಿರ್-ಸೋಮನಾಥ್ ಜಿಲ್ಲೆಗಳ ರೈತರು ಈ ಯೋಜನೆಯ ಸದುಪಯೋಗ ಪಡೆಯಲಿದ್ದು, 2022-23ರ ವೇಳೆಗೆ ಹಂತ ಹಂತವಾಗಿ ಉಳಿದ ಜಿಲ್ಲೆಗಳನ್ನು ಸೇರಿಸಲಾಗುವುದು.