ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣಂ ವೆಂಕಟಾಪುರದಲ್ಲಿ ನಡೆದಿರುವ ವಿಷಾನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಡಿಆರ್ಎಫ್ನ ನಿರ್ದೇಶಕ ಎಸ್.ಎನ್.ಪ್ರಧಾನ್ ಮಾತನಾಡಿ ಮಾಹಿತಿ ನೀಡಿದ್ದು, ಎಲ್ಲವೂ ಹತೋಟಿಯಲ್ಲಿದೆ ಎಂದಿದ್ದಾರೆ.
ಕಾರ್ಖಾನೆಯಲ್ಲಿ ಎರಡು ಸಲ ಅನಿಲ ಸೋರಿಕೆ ಆಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿದೆ. ಈ ಸುದ್ದಿ ಸತ್ಯಕ್ಕೆ ದೂರವಾಗಿದೆ. ಆ ರೀತಿಯಾಗಿ ನಡೆದಿಲ್ಲ ಎಂದಿರುವ ಅವರು ಪ್ರಕರಣ ಇದೀಗ ಹತೋಟಿಯಲ್ಲಿದೆ. ತಾಂತ್ರಿಕ ಕಾರಣದಿಂದ ಸ್ಥಾವರದಲ್ಲಿ ಸೋರಿಕೆ ಆಗಿದೆ ಎಂದು ತಿಳಿಸಿದ್ದಾರೆ.
ನಿನ್ನೆ ನಡೆದಿದ್ದ ವಿಷಾನಿಲ ಸೋರಿಕೆಯಲ್ಲಿ 12 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಜನರು ಆಸ್ಪತ್ರೆಗೆ ಸೇರಿಕೊಂಡಿದ್ದಾರೆ. ಇದರ ಮಧ್ಯೆ ಕಾರ್ಖಾನೆ ಸುತ್ತಮುತ್ತಲಿನ ಗ್ರಾಮದ 5 ಸಾವಿರ ಜನರಲ್ಲಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಘಟನಾ ಸ್ಥಳಕ್ಕೆ ಧಾವಿಸಿದ್ದ ಎನ್ಡಿಆರ್ಎಫ್ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದರು.
ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಗೃಹ ಸಚಿವ ಹಾಗೂ ರಕ್ಷಣಾ ಸಚಿವರು ಸೇರಿದಂತೆ ಪ್ರಮುಖ ಎನ್ಡಿಆರ್ಎಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಘಟನಾ ಸ್ಥಳಕ್ಕೆ ಧಾವಿಸಿದ್ದ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂ ನಗದು ಹಾಗೂ ಓರ್ವರಿಗೆ ಕೆಲಸದ ಭರವಸೆ ನೀಡಿದ್ದಾರೆ. ಜೊತೆಗೆ ಗಾಯಾಳುಗಳಿಗೂ ಪ್ರತ್ಯೇಕ ಪರಿಹಾರ ಪ್ರಕಟಿಸಿದ್ದಾರೆ.