ಹೈದರಾಬಾದ್: ನಗರದಲ್ಲಿ ನಿನ್ನೆ ನಡೆದ ಭೀಕರ ಕಾರು ಅಪಘಾತ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಯಾದಾದ್ರಿ ಜಿಲ್ಲೆಯ ಚೌಟುಪ್ಪಲ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದ ದೃಶ್ಯ ಇಡಿ ದೇಶವೇ ನೋಡಿದೆ. ಆದ್ರೆ ಈ ಅಪಘಾತದಲ್ಲಿ ಒಂದು ಜೋಡಿಯ ಪ್ರೇಮ ಕಹಾನಿ ದುರಂತವಾಗಿ ಅಂತ್ಯ ಕಂಡಿರುವುದರ ಬಗ್ಗೆ ನಿಮಗೆ ಗೊತ್ತಾ?...
ಹೌದು, ಹೈದರಾಬಾದ್ನ ಹೈಯತ್ನಗರ ನಿವಾಸಿಗಳಾದ ನಾಗರಾಜು ಮತ್ತು ಶ್ರೀಲತಾ ಇಬ್ಬರು ಪ್ರೀತಿಸುತ್ತಿದ್ದು, ಪ್ರೇಮ ವಿವಾಹವಾಗಲು ನಿರ್ಧರಿಸಿದ್ದರು. ಅದರಂತೆ ನೂರಾರು ಕನಸುಗಳನ್ನು ಹೊತ್ತುಕೊಂಡು ಮದುವೆಯಾಗಲು ನಲ್ಗೊಂಡ್ ಜಿಲ್ಲೆಯ ನಾರ್ಕಟ್ಪಲ್ಲಿ ತಾಲೂಕಿನ ಚೆರುವುಗಟ್ಟ ದೇವಾಲಯಕ್ಕೆ ತೆರಳುತ್ತಿದ್ದರು. ಆದ್ರೆ... ವಿಧಿ ಅವರನ್ನು ಒಂದಾಗಲು ಬಿಡಲಿಲ್ಲ.
ಮದುವೆ ಮಾಡಿಕೊಳ್ಳಲು ಬೈಕ್ನಲ್ಲಿ ತೆರಳುತ್ತಿದ್ದ ನವ ಜೋಡಿ ಚೌಟುಪ್ಪಲ್ ಬಳಿಯ ಟ್ರಾಫಿಕ್ ಸಿಗ್ನಲ್ ಬಳಿ ನಿಲ್ಲಿಸಿದ್ದಾರೆ. ರೆಡ್ ಸಿಗ್ನಲ್ ಬದಲಿಯಾಗಿ ಗ್ರೀನ್ ಸಿಗ್ನಲ್ ಬಿದ್ದಿದೆ. ಟ್ರಾಫಿಕ್ ಸಿಗ್ನಲ್ಗಾಗಿ ನಿಂತಿದ್ದ ವಾಹನಗಳೆಲ್ಲವೂ ನಿಧಾನವಾಗಿ ಚಲಿಸಲು ಆರಂಭಿಸಿದ್ದವು. ಆದ್ರೆ ಚಾಲಕನ ನಿರ್ಲಕ್ಷ್ಯ ಮತ್ತು ಅತೀವೇಗದಿಂದ ಹಿಂಬದಿಯಿಂದ ಬಂದ ಕಾರೊಂದು ನವ ಜೋಡಿಯಿದ್ದ ಬೈಕ್ ಮತ್ತು ಇನ್ನಿತರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದ್ರೂ ಸಹ ಚಾಲಕ ಕಾರು ನಿಲ್ಲಿಸದೇ ಅದೇ ರಭಸದಲ್ಲಿ ಚಲಾಯಿಸಿಕೊಂಡು ಸಾಗಿದ್ದಾನೆ.
ಇನ್ನು ಕಾರು ಡಿಕ್ಕಿ ಹೊಡೆದ ರಭಸಕ್ಕೆ ನಾಗರಾಜು ಮತ್ತು ಶ್ರೀಲತಾ ಇದ್ದ ಬೈಕ್ ಕೆಳಗೆ ಬಿದ್ದು, ಬೆಂಕಿ ಹೊತ್ತಿಕೊಂಡಿದೆ. ಬೈಕ್ಗೆ ಬೆಂಕಿ ಬಿದ್ದಿದ್ದರಿಂದ ನಾಗರಾಜು ಮತ್ತು ಶ್ರೀಲತಾಗೆ ಸುಟ್ಟ ಗಾಯಗಳಾಗಿದ್ದವು. ಅಪಘಾತದಲ್ಲಿ ಈ ನವ ಜೋಡಿ ಸೇರಿ ಒಟ್ಟು ಆರು ಜನ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ವಿಧಿಯಾಟಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜು ಚಿಕಿತ್ಸೆ ಫಲಿಸದೇ ಮೃತಟ್ಟಿದ್ದಾರೆ. ಇನ್ನು ಶ್ರೀಲತಾ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.