ಔರಂಗಬಾದ್ (ಮಹಾರಾಷ್ಟ್ರ): ಆ್ಯಂಬುಲೆನ್ಸ್ ಸಿಗದ ಕಾರಣ ಎರಡು ಮೃತದೇಹಗಳನ್ನು 3 ಕಿಲೋ ಮೀಟರ್ ಹೊತ್ತೊಕೊಂಡು ನಡೆದ ಘಟನೆ ಸಿಲೋಡ್ ತಾಲೂಕಿನ ಡರ್ಗಾಂವ್ ಗ್ರಾಮದಲ್ಲಿ ನಡೆದಿದೆ.
ಡರ್ಗಾಂವ್ ಗ್ರಾಮದ ತೋಟದ ಮಧ್ಯದಲ್ಲಿನ ಬಾವಿಯಲ್ಲಿ ವಂದನಾ ಬನ್ಕರ್ (30) ಮತ್ತು ಆಕೆಯ ಪುತ್ರಿ ಭಾರತಿ (7) ಎಂಬುವರ ಶವಗಳು ಪತ್ತೆಯಾಗಿದ್ದವು. ಮೃತದೇಹಗಳನ್ನು ಬಾವಿಯಿಂದ ಮೇಲೆತ್ತಿದ ಸಂಬಂಧಿಕರು, ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಮೃತದೇಹ ಪತ್ತೆಯಾದ ಸ್ಥಳ ತೋಟದ ಮಧ್ಯೆ ಇದ್ದಿದ್ದರಿಂದ ಆ್ಯಂಬುಲೆನ್ಸ್ ತಲುಪಲು ಅಸಾಧ್ಯವಾಗಿತ್ತು. ಹೀಗಾಗಿ ಸಂಬಧಿಕರು ಸುಮಾರು 3 ಕಿಲೋ ಮೀಟರ್ ದೂರ ಎರಡು ಮೃತದೇಹಗಳನ್ನು ಹೊತ್ತು ಸಾಗಿದ್ದು, ಸ್ಥಳಕ್ಕೆ ಆ್ಯಂಬುಲೆನ್ಸ್ ತಲುಪದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ತಾಯಿ-ಮಗಳು ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಸದ್ಯ ಅವರ ಮೃತದೇಹಗಳು ಬಾವಿಯಲ್ಲಿ ಪತ್ತೆಯಾಗಿವೆ. ಮೇಲ್ನೋಟಕ್ಕೆ ಅಕಸ್ಮಿಕವಾಗಿ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆಯಿಂದ ನಿಜವಾದ ಕಾರಣ ತಿಳಿದು ಬರಲಿದೆ ಎಂದು ಪೊಲೀಸ್ ಅಧಿಕಾರಿ ಕಿರಣ್ ಬಿಡ್ವೆ ತಿಳಿಸಿದ್ದಾರೆ. ಮೃತರ ಸಂಬಂಧಿಗಳು ಇದು ಕೊಲೆ ಎಂದು ಆರೋಪಿಸಿದ್ದು, ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.