ಕಾನ್ಪುರ (ಉತ್ತರ ಪ್ರದೇಶ): 8 ಪೊಲೀಸರ ಹತ್ಯೆಯ ರೂವಾರಿ ಹಾಗೂ ಪ್ರಮುಖ ಆರೋಪಿ ವಿಕಾಸ್ ದುಬೆ ಬಂಧನಕ್ಕೆ ಉತ್ತರ ಪ್ರದೇಶ ಪೊಲೀಸರು ಸತತ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಆದರೆ, ಆತನ ಸುಳಿವು ಸಿಗುತ್ತಿಲ್ಲ. ಇತ್ತ ಪೊಲೀಸರು ಮಂಗಳವಾರ ಆತನ ನಾನಾ ಅವತಾರದ ಫೋಟೋಗಳನ್ನ ಬಿಡುಗಡೆ ಮಾಡಿದ್ದಾರೆ.
ಈ ನಡುವೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ವಿಕಾಸ ದುಬೆ ಆಪ್ತ ಸಹಾಯಕ ಜೈ ಬಾಜಪೇಯಿ ನಿವಾಸ ಮೇಲೆ ಕಾನ್ಪುರ ಪೊಲೀಸರು ದಾಳಿ ನಡೆಸಿದ್ದಾರೆ. ಏತನ್ಮಧ್ಯೆ, ಕಾನ್ಪುರ್ ಎನ್ಕೌಂಟರ್ಗೆ ಸಂಬಂಧಿಸಿದಂತೆ ಚೌಬೆಪುರ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿಗಳನ್ನ ವಿಶೇಷ ತನಿಖಾ ದಳ ವಿಚಾರಣೆಗೆ ಒಳಪಡಿಸಿದೆ ಎಂದು ಕಾನ್ಪುರ್ ಐಜಿಪಿ ಮೋಹಿತ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಇನ್ನು ದುಬೆ ಬಂಧನಕ್ಕೆ ತೆರಳಿದ್ದಾಗ ಇದ್ದಕ್ಕಿದ್ದಂತೆ ಕಣ್ಮರೆ ಆಗಿದ್ದ ಚೌಬೆಪುರ ಪೊಲೀಸ್ ಠಾಣೆಯ ಅಧಿಕಾರಿ ವಿನಯ್ ತಿವಾರಿ ಅವರನ್ನ ಸಹ ಅಮಾನತು ಮಾಡಲಾಗಿದೆ. 8 ಪೊಲೀಸರ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕಾಸ್ ದುಬೆ ಬಂಧನಕ್ಕಾಗಿ ಸುಮಾರು 40 ತಂಡಗಳು ಸತತ ಕಾರ್ಯಾಚರಣೆ ನಡೆಸುತ್ತಿವೆ.
ಘಟನೆ ನಡೆದು 80 ಗಂಟೆಗಳ ನಂತರವೂ ಯುಪಿ ಪೊಲೀಸರು ಮತ್ತು ಎಟಿಎಸ್ ತಂಡಕ್ಕೆ ದುಬೆ ಇರುವ ಸ್ಥಳವನ್ನ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ನಡುವೆ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಬಂಧನಕ್ಕಾಗಿ ಆತನ ಸುಳಿವು ನೀಡಿದವರಿಗೆ ಪೊಲೀಸ್ ಇಲಾಖೆ 2.5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ. ಈ ಹಿಂದೆ 50 ಸಾವಿರ ವಿದ್ದ ಬಹುಮಾನದ ಮೊತ್ತವನ್ನ 2.5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.