ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ದುಷ್ಕರ್ಮಿಗಳು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ನಡೆದ ಎನ್ಕೌಂಟರ್ನಲ್ಲಿ 8 ಮಂದಿ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದರೆ, ಎಸ್ಒ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಎನ್ಕೌಂಟರ್ನಲ್ಲಿ ಸಿಒ ಬಿಲ್ಹೋರ್ ದೇವೇಂದ್ರ ಮಿಶ್ರಾ, ಎಸ್ಒ ಶಿವರಾಜ್ಪುರ ಮಹೇಶ್ ಯಾದವ್, ಸಬ್ ಇನ್ಸ್ಪೆಕ್ಟರ್ ಮತ್ತು ಐವರು ಸಿಬ್ಬಂದಿ ಕೂಡ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ರೀಜೆನ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೌಬೆಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಿಕ್ರು ಗ್ರಾಮಕ್ಕೆ ರೌಡಿ ಶೀಟರ್ ವಿಕಾಸ್ ದುಬೆನನ್ನು ಬಂಧಿಸಲು ತೆರಳಿದ್ದಾಗ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ 8 ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ವಿಕಾಸ್ ದುಬೆ ಮೇಲೆ ಸುಮಾರು 60 ಪ್ರಕರಣಗಳು ದಾಖಲಾಗಿವೆ.
ಘಟನೆ ನಡೆಯುತ್ತಿದ್ದಂತೆ ಕಾನ್ಪುರ ವಲಯ ಎಎಸ್ಪಿ, ಎಡಿಜಿಪಿ ಹಾಗೂ ಐಜಿ ಸ್ಥಳಕ್ಕೆ ಧಾವಿಸಿದ್ದು, ವಿಕಾಸ್ ದುಬೆ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಫೊರೆನ್ಸಿಕ್ ತಂಡ ಆಗಮಿಸಿದೆ.
ಸಿಎಂ ಸಂತಾಪ: ಕಠಿಣ ಕ್ರಮಕ್ಕೆ ನಿರ್ದೇಶನ:
ಈ ಘಟನೆ ಸಂಬಂಧ ಸಿಎಂ ಯೋಗಿ ಆದಿತ್ಯನಾಥ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಕ್ರಿಮಿನಲ್ಗಳನ್ನ ತಕ್ಷಣ ಬಂಧಿಸುವಂತೆ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಡಿಜಿಪಿ ಹೆಚ್.ಸಿ. ಅವಾಸ್ತಿಗೆ ಸಿಎಂ ನಿರ್ದೇಶನ ನೀಡಿದ್ದಾರೆ.
ರೌಡಿಗಳಿಗಾಗಿ ಶೋಧ ತೀವ್ರಗೊಳಿಸಿದ ಪೊಲೀಸರು:
ಕಾನ್ಪುರ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಜೆ ಎನ್ ಸಿಂಗ್ ಮಾತನಾಡಿ, ದುಷ್ಕರ್ಮಿಗಳಿಗಾಗಿ ಕೊಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದೇವೆ. ಇದಕ್ಕಾಗಿ ಕನೌಜ್ ಹಾಗೂ ಕಾನ್ಪುರ್ ದೆಹತ್ನಿಂದಲೂ ಹೆಚ್ಚುವರಿ ಪೊಲೀಸರನ್ನ ಕರೆಯಿಸಿಕೊಳ್ಳಲಾಗಿದೆ. ಶೀಘ್ರವೇ ಅವರನ್ನೆಲ್ಲ ಬಂಧಿಸಿ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಗಾಯಗೊಂಡಿರುವ ಪೊಲೀಸರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಡಿಜಿಪಿ ಸಹ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ವಿಕಾಸ್ ಯಾದವ್ ಬಂಧನಕ್ಕೆ ಹೋದಾಗ ಘಟನೆ ನಡೆದಿದೆ ಎಂದು ವಿವರಣೆ ನೀಡಿದ್ದಾರೆ.
ರೌಡಿ ಬಂಧನಕ್ಕೆ ಎಸ್ಟಿಎಫ್ ಟೀಂ: ಡಿಜಿಪಿ
ಈ ನಡುವೆ ಎಸ್ಟಿಎಫ್ ತಂಡ ಘಟನಾ ಸ್ಥಳಕ್ಕೆ ರವಾನೆಯಾಗಿದೆ. ಸ್ಥಳಕ್ಕೆ ತಲುಪಿಸಿರುವ ವಿಶೇಷ ಕಾರ್ಯಪಡೆ ತನ್ನ ಕಾರ್ಯಾಚರಣೆಯನ್ನ ಆರಂಭಿಸಿದೆ ಎಂದು ಡಿಜಿಪಿ ಎಚ್ ಸಿ ಅವಾಸ್ಥಿ ಹೇಳಿದ್ದಾರೆ.