ಹಿಮಾಚಲ ಪ್ರದೇಶ:ಬಾಲಿವುಡ್ ನಟಿ ಕಂಗನಾ ರಾಣಾವತ್ಗೆ ಅವರಿಗೆ ಹಿಮಾಚಲ ಪ್ರದೇಶ ಸರ್ಕಾರ ಸಂಪೂರ್ಣ ಭದ್ರತೆ ನೀಡಲಿದೆ ಎಂದು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ.
ನಟಿ ಕಂಗನಾ ಅವರ ಸಹೋದರಿ ನನಗೆ ಕರೆ ಮಾಡಿ ಸಹೋದರಿ ಕಂಗನಾ ಜೀವ ಬೆದರಿಕೆ ಎದುರಿಸುತ್ತಿರುವುದರಿಂದ ಸೂಕ್ತ ರಕ್ಷಣೆ ಒದಗಿಸುವಂತೆ ಮನವಿ ಮಾಡಿಕೊಂಡರು. ಜೊತೆಗೆ ಅವರ ತಂದೆ ಕೂಡ ಈ ಸಂಬಂಧ ಭದ್ರತೆ ಕೋರಿ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ಸಿಎಂ ಜೈರಾಮ್ ಠಾಕೂರ್ ತಿಳಿಸಿದ್ದಾರೆ. ಕಂಗನಾ ಹಿಮಾಚಲ ಪ್ರದೇಶದ ಹೆಣ್ಣುಮಗಳು ಹಾಗೂ ಸೆಲೆಬ್ರೆಟಿ ಕೂಡ. ಹೀಗಾಗಿ ಅವರಿಗೆ ಸೂಕ್ತ ಭದ್ರತೆ ಒದಗಿಸುವುದು ನಮ್ಮ ಕರ್ತವ್ಯ. ಈ ಹಿನ್ನೆಲೆ ನಾನು ಡಿಜಿಪಿ ಸಂಜಯ್ ಕುಂಡು ಅವರಿಗೆ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿರುವುದಾಗಿ ತಿಳಿಸಿದ್ರು.
ಸೆಪ್ಟೆಂಬರ್ 9 ರಂದು ಕಂಗನಾ ಮುಂಬೈಗೆ ಪ್ರಯಾಣಿಸುವ ಪ್ಲಾನ್ ಹೊಂದಿದ್ದಾರೆ. ಹೀಗಾಗಿ ರಾಜ್ಯದೊಳಗೆ ಅವರಿಗೆ ಭದ್ರತೆಯನ್ನು ನೀಡುವ ಸಾಧ್ಯತೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಮತ್ತು ಅಗತ್ಯವಿದ್ದರೆ ಬೇರೆಡೆ ಕೂಡ ಸೂಕ್ತ ಭದ್ರತೆ ನೀಡುವ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ರು.
ಕಂಗನಾ ಮುಂಬೈಗೆ ಬರಕೂಡದು ಎಂದು ಕೆಲ ಶಿವಸೇನೆಯ ನಾಯಕರು ಬೆದರಿಕೆ ಒಡ್ಡಿರುವುದನ್ನು ಇಲ್ಲಿ ಸ್ಮರಿಸಬಹುದು.