ಲಖನೌ(ಉ.ಪ್ರದೇಶ): ಕಳ್ಳತನ ಮಾಡುವುದನ್ನು ತಡೆಯಲು ಮುಂದಾದ ಮಾಜಿ ಯೋಧನನ್ನು ದುಷ್ಕರ್ಮಿಗಳು ಹೊಡೆದು ಕೊಂದಿರುವ ಘಟನೆ ಉತ್ತರಪ್ರದೇಶದ ಗೊದಿಯಾನಕ ಪೂರ್ವ್ ಗ್ರಾಮದಲ್ಲಿ ನಡೆದಿದೆ.
ಕಳೆದ ಶನಿವಾರ ರಾತ್ರಿ ನಿವೃತ್ತ ಯೋಧ ಅಮಾನುಲ್ಲಾ (64) ಎಂಬುವರ ಮೇಲೆ ದುಷ್ಕರ್ಮಿಗಳು ಮನಬಂದಂತೆ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾಗಿ ಅಸಿಸ್ಟೆಂಟ್ ಎಸ್ಪಿ ದಯಾರಾಮ್ ತಿಳಿಸಿದ್ದಾರೆ.
ಅಮಾನುಲ್ಲಾ ಅವರ ಮನೆಯ ಪಕ್ಕದ ಅಂಗಡಿಯಲ್ಲಿ ಕಳ್ಳತನ ಮಾಡಲು ಖದೀಮರ ಗುಂಪೊಂದು ಮುಂದಾಗಿತ್ತು. ಇದನ್ನು ಗಮನಿಸಿದ್ದ ಅಮಾನುಲ್ಲಾ, ಪೊಲೀಸರಿಗೆ ಮಾಹಿತಿ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಇದರಿಂದ ಕೋಪಗೊಂಡ ಖದೀಮರು ಮನೆಯೊಳಗೆ ನುಗ್ಗಿ, ದೊಣ್ಣೆಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದರು. ಅಮಾನುಲ್ಲಾರ ತಲೆಗೆ ಬಲವಾದ ಪೆಟ್ಟು ಬಿದ್ದದ್ದರಿಂದ ಅವರು ಮೃತಪಟ್ಟರೆಂದು ಅಮಾನುಲ್ಲಾರ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.