ನವದೆಹಲಿ: 72ನೇ ಗಣರಾಜ್ಯೋತ್ಸವ ಮುನ್ನಾದಿನವಾದ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಗಣರಾಜ್ಯೋತ್ಸವಕ್ಕಾಗಿ ದೇಶದ ಜನರಿಗೆ ಶುಭ ಕೋರಿದ ರಾಷ್ಟ್ರಪತಿ, ಗಣರಾಜ್ಯೋತ್ಸವ ಎಲ್ಲ ಭಾರತೀಯರಿಗೂ ವಿಶೇಷ ಹಾಗೂ ಮಹತ್ವದ ದಿನವಾಗಿದೆ ಎಂದರು.
ಕೋವಿಡ್ ವಿರುದ್ಧದ ಯಶಸ್ವಿ ಹೋರಾಟ ಮುಂದುವರೆದಿದ್ದು, ಲಸಿಕೆ ಕಂಡು ಹಿಡಿದಿರುವ ವಿಜ್ಞಾನಿಗಳಿಗೆ ಧನ್ಯವಾದಗಳು. ಅವರಿಂದ ಇಡೀ ವಿಶ್ವವೇ ಹೆಮ್ಮೆ ಪಡುವಂತಹ ಕೆಲಸವಾಗಿದೆ. ನಮ್ಮ ವಿಜ್ಞಾನಿಗಳು, ವೈದ್ಯರು ಹಾಗು ಇತರೆ ವರ್ಗದ ಜನರೊಂದಿಗೆ ಸೇರಿ, ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಕೆ ಮಾಡಿದಾಗ ಕೊರೊನಾ ವಿರುದ್ಧ ಅದ್ಭುತವಾಗಿ ಹೋರಾಟ ನಡೆಸಿದ್ದು, ಸಾವಿನ ಪ್ರಮಾಣ ಕೂಡ ಇಲ್ಲಿ ಕಡಿಮೆ ಇದೆ ಎಂದಿದ್ದಾರೆ.
ಆಹಾರ ಧಾನ್ಯಗಳು ಮತ್ತು ಡೈರಿ ಉತ್ಪನ್ನಗಳಲ್ಲಿ ನಮ್ಮ ವಿಶಾಲ ಜನಸಂಖ್ಯೆಯ ದೇಶವನ್ನ ಸ್ವಾವಲಂಬಿಗಳನ್ನಾಗಿ ಮಾಡಿದ ರೈತರಿಗೆ ಪ್ರತಿಯೊಬ್ಬ ಭಾರತೀಯರು ನಮಸ್ಕರಿಸುತ್ತಾರೆ. ಪ್ರಕೃತಿಯ ಪ್ರತಿಕೂಲತೆಗಳು, ಹಲವಾರು ಇತರೆ ಸವಾಲುಗಳು ಕೋವಿಡ್-19 ಸಾಂಕ್ರಾಮಿಕ ರೋಗದ ಹೊರತಾಗಿಯೂ ನಮ್ಮ ರೈತರು ಕೃಷಿ ಉತ್ಪಾದನೆಯಲ್ಲಿ ಯಶಸು ಸಾಧಿಸಿದ್ದಾರೆ ಎಂದರು.
ಇದನ್ನೂ ಓದಿ: ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ: ಭಾರತದ 15 ಯೋಧರಿಗೆ ಗಾಯ!
ಹಿಂದಿನ ವರ್ಷ ನಮಗೆ ಪ್ರತಿಕೂಲ ಸಮಯವಾಗಿತ್ತು. ನಮ್ಮ ಗಡಿಯಲ್ಲಿ ಯೋಧರು ಅನೇಕ ಸಮಸ್ಯೆ ಎದುರಿಸಿದ್ದು, ಧೀರ ಸೈನಿಕರು ಎದುರಾಳಿಗಳಿಗೆ ಪ್ರತ್ಯುತ್ತರ ನೀಡಿದ್ದಾರೆ. ಇದರಲ್ಲಿ 20 ಯೋಧರು ತಮ್ಮ ಪ್ರಾಣ ಕಳೆದುಕೊಳ್ಳಬೇಕಾಯಿತು. ಶಾಂತಿಗಾಗಿ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಿದ್ದರೂ, ನಮ್ಮ ರಕ್ಷಣಾ ಪಡೆಗಳು ಎದುರಾಳಿಗಳಿಂದ ಆಗುತ್ತಿರುವ ದಾಳಿ ಯಶಸ್ವಿಯಾಗಿ ಹಿಮ್ಮೆಟ್ಟಿಸುತ್ತಿದ್ದಾರೆ ಎಂದು ಕೋವಿಂದ್ ಅಭಿಪ್ರಾಯಪಟ್ಟರು.