ನವದೆಹಲಿ : ಮಿಷನ್ ಪೂರ್ವೋದಯದಿಂದಾಗಿ ಪೂರ್ವ ಭಾರತದ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯಕವಾಗಿದ್ದು, ಈ ಪ್ರದೇಶದಲ್ಲಿ ವಾಸಿಸುತ್ತಿರುವ 50 ಕೋಟಿಗೂ ಹೆಚ್ಚು ಭಾರತೀಯರ ಜೀವನ ಸುಧಾರಿಸಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಬಳಿಕ ಮಾತನಾಡಿದ ಅವರು, ಕಾಶಿಯಿಂದ ಕೊಹಿಮಾವರೆಗೆ ಭಾರತದ 50 ಕೋಟಿಗೂ ಹೆಚ್ಚು ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ವ ಭಾರತದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದರು.
ಉಜ್ವಲಾ ಯೋಜನೆ, ಶೌಚಾಲಯ ನಿರ್ಮಾಣ, ಜನ್ಧನ್, ಪಿಎಂ ಆವಾಸ್, ಉರ್ಜಾ ಗಂಗಾ, ಉಡಾನ್ ಸೇರಿ ಸರ್ಕಾರದ ಯೋಜನೆಗಳಲ್ಲಿ ಪೂರ್ವ ಭಾರತದ ಜನರು ಪ್ರಮುಖ ಫಲಾನುಭವಿಗಳಾಗಿದ್ದಾರೆ. ಪ್ರಧಾನಿ ಮೋದಿ ಅವರು ಆತ್ಮನಿರ್ಭರ್ ಭಾರತ್ ಅಡಿ ವಲಸೆ ಕಾರ್ಮಿಕರ ಕಲ್ಯಾಣ ಮತ್ತು ಉದ್ಯೋಗ ಸೃಷ್ಟಿಗೆ ಕ್ರಮ ತೆಗೆದುಕೊಂಡಿದ್ದಾರೆ ಎಂದರು.
ನಮ್ಮ ಪ್ರಧಾನಿಯವರು ಕೊರೊನಾ ಸಮಯದಲ್ಲಿ ರಾಷ್ಟ್ರವನ್ನು ಮುಂಚೂಣಿಯಿಂದ ಮುನ್ನಡೆಸಿದ್ದರು. ಅಷ್ಟೇಅಲ್ಲ, ಇತರ ದೇಶಗಳಿಗೂ ಸಹಾಯಹಸ್ತ ನೀಡಿದ್ದು, ಇತರ ದೇಶಗಳು ಮೋದಿಯವರಿಗೆ ಕೃತಜ್ಞರಾಗಿರಬೇಕು. ಇದು ಎಲ್ಲಾ ಭಾರತೀಯರಿಗೂ ಹೆಮ್ಮೆಯ ವಿಷಯ ಎಂದರು.
ಓದಿ: ಪೆಟ್ರೋಲ್-ಡೀಸೆಲ್ ಬೆಲೆ ಗಗನಮುಖಿ : ಪೆಟ್ರೋಲ್ 23 ಪೈಸೆ, ಡೀಸೆಲ್ 34 ಪೈಸೆ ಏರಿಕೆ
ದೇಶದ ನೈಸರ್ಗಿಕ ಸಂಪನ್ಮೂಲಗಳು ನಾಗರಿಕರಿಗೆ ಸೇರಿವೆ. ನೈಸರ್ಗಿಕ ಸಂಪನ್ಮೂಲಗಳ ಹಂಚಿಕೆಗಾಗಿ ನಾವು ಹೊಸ, ಪಾರದರ್ಶಕ ನೀತಿ ತಂದಿದ್ದೇವೆ. ನೈಸರ್ಗಿಕ ಸಂಪನ್ಮೂಲಗಳ ಪಾರದರ್ಶಕ ಹರಾಜಿನಿಂದ ಉತ್ಪತ್ತಿಯಾಗುವ ಆರ್ಥಿಕ ಸಂಪನ್ಮೂಲಗಳು ಆಯಾ ರಾಜ್ಯಗಳಿಗೆ ಹೋಗುತ್ತವೆ ಎಂದು ಹೇಳಿದರು.