ಲಖನೌ(ಉತ್ತರ ಪ್ರದೇಶ) : ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮುಚ್ಚಲ್ಪಟ್ಟಿರುವ ಎಲ್ಲ ಪೂಜಾ ಸ್ಥಳಗಳನ್ನು ತೆರೆಯುವಂತೆ ಉತ್ತರ ಪ್ರದೇಶ ಕಾಂಗ್ರೆಸ್ ಘಟಕವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಪತ್ರ ಬರೆದಿದೆ.
ಲಖನೌ ಕಾಂಗ್ರೆಸ್ ಅಧ್ಯಕ್ಷ ಮುಖೇಶ್ ಸಿಂಗ್ ಚೌಹಾಣ್ ಈ ಪತ್ರವನ್ನು ಬರೆದಿದ್ದಾರೆ. ಅಗತ್ಯ ಸರಕುಗಳ ಅಂಗಡಿಗಳನ್ನು ತೆರೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದೇಶ ಹೊರಡಿಸಿವೆ. ಅದೇ ರೀತಿಯಲ್ಲಿ ಪೂಜಾ ಸ್ಥಳಗಳಾದ ದೇವಾಲಯಗಳು, ಚರ್ಚ್ಗಳು, ಮಸೀದಿಗಳು, ಗುರುದ್ವಾರಗಳನ್ನು ಸಹ ಮುಕ್ತವಾಗಿಸಬೇಕು ಎಂದಿದ್ದಾರೆ.
ಭಾರತವು ಬಹು ಧಾರ್ಮಿಕ ಮತ್ತು ನಂಬಿಕೆ ಆಧಾರಿತ ದೇಶವಾಗಿದೆ. ಇಲ್ಲಿ ದೇವರ ಆರಾಧನೆಯು ತಮ್ಮ ದುಃಖವನ್ನು ಕಡಿಮೆ ಮಾಡುತ್ತದೆ ಎಂದು ಜನ ನಂಬುತ್ತಾರೆ. ಆದರೆ, ಪೂಜಾ ಸ್ಥಳಗಳನ್ನು ಮುಚ್ಚುವುದರಿಂದ ಜನರು ದೇವರನ್ನು ಪ್ರಾರ್ಥಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಲಾಕ್ಡೌನ್ ಮಾನದಂಡಗಳಿಗೆ ಅನುಸಾರವಾಗಿ ಸಾಮಾಜಿಕ ಅಂತರ ನಿಯಮದೊಂದಿಗೆ ಪ್ರಮುಖ ಧಾರ್ಮಿಕ ಸ್ಥಳಗಳನ್ನು ತಕ್ಷಣ ತೆರೆಯಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿರುವಂತೆ ಪ್ರಮುಖ ಪೂಜಾ ಸ್ಥಳಗಳ ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್ ಯಂತ್ರಗಳನ್ನು ಇಡಬೇಕು. ಮದ್ಯದಂಗಡಿಗಳನ್ನೇ ತೆರೆಯಲು ಸಾಧ್ಯವಾಗಿದೆ. ಅದೇ ರೀತಿಯಲ್ಲಿ ದೇವಾಲಯಗಳು, ಮಸೀದಿಗಳು, ಗುರುದ್ವಾರಗಳು, ಚರ್ಚುಗಳನ್ನು ಸಹ ಸಾಮಾಜಿಕ ಅಂತರದ ಮಾನದಂಡಗಳನ್ನು ಸಂಪೂರ್ಣವಾಗಿ ಅನುಸರಿಸಿ ತೆರೆಯಬೇಕು ಎಂದಿದ್ದಾರೆ.
ಅಖಿಲ ಭಾರತೀಯ ಅಖರಾ ಪರಿಷತ್ನ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಕೂಡ ರಾಜ್ಯಾದ್ಯಂತ ದೇವಾಲಯಗಳನ್ನು ತೆರೆಯುವಂತೆ ಬೇಡಿಕೆ ಇಟ್ಟಿದ್ದಾರೆ.