ನವದೆಹಲಿ: ಪರೀಕ್ಷೆ ಸಮಯದಲ್ಲಿ ನಕಲು ಮಾಡಿದ ಆರೋಪ ಎದುರಿಸುತ್ತಿರುವ ದೆಹಲಿ ವಿವಿ ವಿದ್ಯಾರ್ಥಿ ಸಲ್ಲಿಸಿದ್ದ ವರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್, 'ಪರೀಕ್ಷೆಗಳಲ್ಲಿ ನಕಲು ಮಾಡುವುದು ಮತ್ತು ಮೋಸ ಮಾಡುವುದು ಸಮಾಜ ಮತ್ತು ಯಾವುದೇ ದೇಶದ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುವ ಸಾಂಕ್ರಾಮಿಕ ರೋಗವಿದ್ದಂತೆ ಎಂದು ಅಭಿಪ್ರಾಯಪಟ್ಟಿದೆ.
"ಪರೀಕ್ಷೆಗಳಲ್ಲಿ ನಕಲು ಮತ್ತು ಮೋಸ ಮಾಡುವುದು ಪ್ಲೇಗ್ನಂತಿದೆ. ಇದು ಯಾವುದೇ ದೇಶದ ಸಮಾಜ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಬಲ್ಲ ಸಾಂಕ್ರಾಮಿಕ ರೋಗವಾಗಿದೆ. ಅದನ್ನು ಪರೀಕ್ಷಿಸದೆ ಬಿಟ್ಟರೆ ಅಥವಾ ಮೃದುತ್ವವನ್ನು ತೋರಿಸಿದರೆ ಹಾನಿಕಾರಕ ಪರಿಣಾಮ ಬೀರುತ್ತದೆ. ಯಾವುದೇ ದೇಶದ ಪ್ರಗತಿ, ಶಿಕ್ಷಣ ವ್ಯವಸ್ಥೆಯ ಸಮಗ್ರತೆಯು ದೋಷ ರಹಿತವಾಗಿರಬೇಕು ಎಂದು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಅವರ ಏಕ ಸದಸ್ಯ ನ್ಯಾಯಪೀಠ ಹೇಳಿದೆ.
ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿ ಅರ್ಜೂ ಅಗರ್ವಾಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿದಾಗ ಹೈಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಕಾಪಿ ಮಾಡಿದ್ದಕ್ಕಾಗಿ ಇಡೀ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸುವ ವಿಶ್ವವಿದ್ಯಾಲಯದ ಆದೇಶ ಪ್ರಶ್ನಿಸಿ ವಿದ್ಯಾರ್ಥಿನಿ ಕೋರ್ಟ್ ಮೆಟ್ಟಿಲೇರಿದ್ದಳು.