ನವದೆಹಲಿ : ರಾಜ್ಯಗಳು ಕೊರೊನಾ ವಿರುದ್ಧ ಹೋರಾಡುವ ಸಲುವಾಗಿ ತುರ್ತು ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ 15 ಸಾವಿರ ಕೋಟಿ ರೂಪಾಯಿಗಳ ಪ್ಯಾಕೇಜ್ನ ಘೋಷಣೆ ಮಾಡಿದೆ. ಈ ಮೂಲಕ ರಾಜ್ಯಗಳು ಕೊರೊನಾ ವಿರುದ್ಧ ಹೋರಾಡಲು ನೆರವು ನೀಡಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ನ್ಯಾಷನಲ್ ಹೆಲ್ತ್ ಮಿಷನ್ ಅಡಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಹಣವನ್ನು ಹಂಚಲಾಗುತ್ತದೆ. ಕೊರೊನಾ ಸೋಂಕು ಪತ್ತೆ, ವೈದ್ಯಕೀಯ ಸಾಧನಗಳ ಖರೀದಿ, ಔಷಧಗಳ ಖರೀದಿ ಸೇರಿ ಮುಂತಾದ ಕಾರ್ಯಗಳಿಗೆ ಈ ಹಣವನ್ನು ಬಳಸಬಹುದಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು ಹಾಗೂ ಆರೋಗ್ಯ ಆಯುಕ್ತರಿಗೆ ಪತ್ರ ಬರೆದಿದೆ.
ಐದು ವರ್ಷಗಳಲ್ಲಿ ಮೂರು ಹಂತಗಳಲ್ಲಿ ಒಟ್ಟು ಐದು ವರ್ಷಗಳ ಅವಧಿಯಲ್ಲಿ ಮೂರು ಹಂತಗಳಲ್ಲಿ ಈ ಹಣವನ್ನು ಬಳಕೆ ಮಾಡಲು ನಿರ್ಧಾರ ಮಾಡಲಾಗಿದೆ. ಮಾರ್ಚ್ 2020ರಿಂದ ಮೊದಲ ಹಂತ ಆರಂಭವಾಗಲಿದೆ. ಜೂನ್ 2020ಕ್ಕೆ ಇದು ಕೊನೆಗೊಳ್ಳಲಿದೆ. ಎರಡನೇ ಹಂತ ಜುಲೈ 2020ಕ್ಕೆ ಆರಂಭಗೊಂಡು ಮಾರ್ಚ್ 2021ಕ್ಕೆ ಕೊನೆಗೊಳ್ಳಲಿದೆ. ಮೂರನೇ ಹಂತ 2021ರಿಂದ ಆರಂಭವಾಗಿ ಮಾರ್ಚ್ 2024ಕ್ಕೆ ಕೊನೆಗೊಳ್ಳಲಿದೆ ಎಂದು ತಿಳಿಸಿದೆ.