ಆಂಧ್ರ ಪ್ರದೇಶ: ಮಹಿಳೆ ಹಾಗೂ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳನ್ನು ನೋಡಿಕೊಳ್ಳುವ ಸಲುವಾಗಿ ಆಂಧ್ರ ಪ್ರದೇಶದ ರಾಜಾಮಹೇಂದ್ರವರಂ ಪಟ್ಟಣದಲ್ಲಿ ಮೊದಲ 'ದಿಶಾ ಪೊಲೀಸ್ ಠಾಣೆ'ಯನ್ನು ಹಾಗೂ 'ದಿಶಾ ಆ್ಯಪ್' ಅನ್ನು ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಉದ್ಘಾಟನೆ ಮಾಡಿದ್ದಾರೆ.
ಹೈದರಾಬಾದ್ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಬಳಿಕ ಆಂಧ್ರ ಸರ್ಕಾರ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ತ್ವರಿತ ತನಿಖೆ ಹಾಗೂ ತ್ವರಿತ ವಿಚಾರಣೆ ನಡೆಸುವ ಉದ್ದೇಶದಿಂದ 'ದಿಶಾ ಕಾಯ್ದೆ'ಯನ್ನು ಜಾರಿಗೆ ತಂದಿತ್ತು. ಇದೀಗ ಮೊದಲ ದಿಶಾ ಪೊಲೀಸ್ ಠಾಣೆಯನ್ನು ನಿರ್ಮಿಸಿದೆ.
ದಿಶಾ ಕಾಯ್ದೆಯ ಅಡಿಯಲ್ಲಿ ಮಹಿಳೆ ಹಾಗೂ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳ ತ್ವರಿತ ವಿಚಾರಣೆಗಾಗಿ 13 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದ್ದು, 7 ದಿನಗೊಳಗಾಗಿ ತನಿಖೆ ಮುಗಿಸಿ, 14 ದಿನಗಳೊಳಗಾಗಿ ವಿಚಾರಣೆ ಪೂರ್ಣಗೊಳಿಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗುವುದು. ಅಲ್ಲದೇ ಅತ್ಯಾಚಾರ ಎಸಗಿದ ಆರೋಪಿಗಳಿಗೆ ಮರಣ ದಂಡನೆ ವಿಧಿಸಲಾಗುವುದು. ದಿಶಾ ಕಾಯ್ದೆಯು ಮಹಿಳೆಯರಿಗೆ ಸುರಕ್ಷರೆ ಒದಗಿಸುವುದಲ್ಲದೇ ಅಪರಾಧ ಎಸಗುವವರಿಗೆ ಭಯ ಸೃಷ್ಟಿಸುತ್ತದೆ. 21.10 ಕೋಟಿ ವೆಚ್ಚದಲ್ಲಿ ರಾಜ್ಯದ ಎಲ್ಲಾ 13 ಜಿಲ್ಲೆಗಳಲ್ಲಿ ಒಟ್ಟು 18 ದಿಶಾ ಪೊಲೀಸ್ ಠಾಣೆಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು. ಪ್ರತಿ ಠಾಣೆಗೆ ಉಪ ಪೊಲೀಸ್ ವರಿಷ್ಠಾಧಿಕಾರಿಯನ್ನು ನಿಯೋಜನೆ ಮಾಡಲಾಗುವುದು ಎಂದು ಉದ್ಘಾಟನೆ ಬಳಿಕ ಸಿಎಂ ಜಗನ್ ಹೇಳಿದರು.
ಇದೇ ವೇಳೆ ಮಹಿಳೆಯರು ಸಮಸ್ಯೆಯಲ್ಲಿದ್ದಾಗ ಅವರಿಗೆ ರಕ್ಷನೆ ನೀಡುವ ಸಲುವಾಗಿ 'ದಿಶಾ ಆ್ಯಪ್' ಅನ್ನು ಸಹ ಜಗನ್ ಉದ್ಘಾಟಿಸಿದರು. 'ದಿಶಾ ಆ್ಯಪ್', ಇದೊಂದು ಎಸ್ಒಎಸ್ ಮೊಬೈಲ್ ಅಪ್ಲಿಕೇಶನ್ ಆಗಿದ್ದು, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಹಿಳೆಯರು ಈ ಆ್ಯಪ್ನಲ್ಲಿರುವ ಬಟನ್ ಒತ್ತಿದರೆ ಸಾಕು,ಇದು ನೇರವಾಗಿ ಪೊಲೀಸ್ ಕಂಟ್ರೋಲ್ ರೂಂಗೆ ಎಚ್ಚರಿಕೆ ನೀಡಲಿದೆ.
ಇನ್ನು ಸದ್ಯದಲ್ಲೇ 'ದಿಶಾ ಕಂಟ್ರೋಲ್ ರೂಂ' ಅನ್ನು ಸಹ ಸ್ಥಾಪನೆ ಮಾಡಲಿದ್ದು, ಇದು ಮಹಿಳೆಯರು ಸಮಸ್ಯೆಯಲ್ಲಿ ಸಿಲುಕಿದಾಗ ಇಲ್ಲಿಗೆ ಕರೆ ಮಾಡಿದರೆ, ಅವರಿದ್ದ ಸ್ಥಳಕ್ಕೆ ಹತ್ತಿರದ ವಾಹನಗಳನ್ನು ಕಳುಹಿಸಿ ಸಂತ್ರಸ್ತರನ್ನು ರಕ್ಷಿಸಲಾಗುವುದು ಎಂದು ಕಾರ್ಯಕ್ರಮದ ವೇಳೆ ಪ್ರಕಟಣೆಗೊಂಡ ಅಧಿಕೃತ ಟಿಪ್ಪಣಿಯೊಂದರಲ್ಲಿ ತಿಳಿಸಲಾಗಿದೆ.