ಮುಂಬೈ(ಮಹಾರಾಷ್ಟ್ರ): ಖ್ಯಾತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಆರಂಭಿಕ ತನಿಖೆ ನಡೆಸಿದ್ದ ಪೊಲೀಸರು ಇದೊಂದು ಆತ್ಮಹತ್ಯೆಯ ಪ್ರಕರಣವಾಗಿದೆ ಎಂದು ಹೇಳಿದ್ದರು. ನಂತರ ಪ್ರಕಟಗೊಂಡ ಆರಂಭಿಕ ಮರಣೋತ್ತರ ಪರೀಕ್ಷಾ ವರದಿಯಲ್ಲಿಯೂ ಕೂಡ ಸುಶಾಂತ್ ಅವರ ಸಾವು ಆತ್ಮಹತ್ಯೆ ಎಂದೇ ವಿವರಿಸಲಾಗಿತ್ತು. ಇದೀಗ ಈ ಪ್ರಕರಣದ ಅಂತಿಮ ಮರಣೋತ್ತರ ವರದಿಯನ್ನು ಪೊಲೀಸರ ಕೈ ಸೇರಿದೆ. ಈ ವರದಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಲಾಗಿದೆ.
ನೇಣಿನಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ: ವರದಿ ಪ್ರಕಾರ ಸುಶಾಂತ್ ಸಿಂಗ್ ರಜಪೂತ್ ನೇಣು ಬಿಗಿದುಕೊಂಡ ಕಾರಣ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸುಶಾಂತ್ ಅವರ ಒಳಾಂಗಗಳನ್ನು ರಾಸಾಯನಿಕ ಪರೀಕ್ಷೆಗಾಗಿ ಇಡಲಾಗಿದೆ. ಈ ಮೊದಲು ನೀಡಲಾಗಿದ್ದ ತಾತ್ಕಾಲಿಕ ಮರಣೋತ್ತರ ವರದಿಯಲ್ಲಿ ಮೂವರು ವೈದ್ಯರು ಸಹಿ ಹಾಕಿದ್ದರು. ಆದರೆ, ಫೈನಲ್ ವರದಿಯಲ್ಲಿ ಒಟ್ಟು ಐವರು ವೈದ್ಯರು ಸಹಿ ಹಾಕಿದ್ದಾರೆ. ಈ ವರದಿಯನ್ನು ಸಿದ್ಧಪಡಿಸುವ ಮುನ್ನ ಹೆಚ್ಚಿನ ತಪಾಸಣೆ ಕೂಡಾ ನಡೆಸಲಾಗಿದೆ.
ಇನ್ನೊಂದೆಡೆ, ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಕೂಡ ಹಲವು ಮಾಹಿತಿಗಳನ್ನು ಬಹಿರಂಗಗೊಳಿಸಿದ್ದಾರೆ. ಮೊದಲು ಸುಶಾಂತ್ ಅವರ ಸಾವನ್ನು ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಧನಕ್ಕೆ ಜೋಡಿಸಿ ತನಿಖೆ ನಡೆಸಲಾಗಿತ್ತು. ಆದರೆ, ಬಳಿಕ ಪೊಲೀಸರು ಮ್ಯಾನೇಜರ್ ಸಾವಿನ ಜೊತೆಗೆ ಸುಶಾಂತ್ ಸಾವು ಯಾವುದೇ ರೀತಿಯ ಸಂಬಂಧ ಹೊಂದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ದಿಶಾ, ಸುಶಾಂತ್ ಅವರನ್ನು ಕೇವಲ ಒಂದೇ ಬಾರಿ ಭೇಟಿಯಾದ ಕಾರಣ ಈ ಕನೆಕ್ಷನ್ ಜೋಡಿಸುವುದು ಅಷ್ಟೊಂದು ಸೂಕ್ತವಲ್ಲ ಎಂದು ಕೈಬಿಡಲಾಗಿದೆಯಂತೆ.
ಒಟ್ಟು 23 ವ್ಯಕ್ತಿಗಳ ವಿಚಾರಣೆ ನಡೆದಿದೆ:
ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೆ ಪ್ರಕರಣದಲ್ಲಿ ಪೊಲೀಸರು ಒಟ್ಟು 23 ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ನಟನ ಚಾರ್ಟರ್ಡ್ ಅಕೌಂಟೆಂಟ್ ಅವರ ಹೇಳಿಕೆಯನ್ನು ಕೂಡ ದಾಖಲಿಸಲಾಗಿದೆ. ಏತನ್ಮಧ್ಯೆ ಪೊಲೀಸರು ನಟಿ ರಿಯಾ ಚಕ್ರವರ್ತಿ, ಬ್ಯುಸಿನೆಸ್ ಮ್ಯಾನೇಜರ್, ಪಿಆರ್ ಮ್ಯಾನೇಜರ್, ಕುಶಾಲ್ ಜಾವೇರಿ ಮತ್ತು ಇತರ ಹಲವು ವ್ಯಕ್ತಿಗಳ ಹೇಳಿಕೆಗಳನ್ನು ಕೂಡ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಎಲ್ಲ ಜನರು ಸುಶಾಂತ್ ಜೊತೆ ನಿಕಟ ಸಂಪರ್ಕ ಹೊಂದಿದ್ದಲ್ಲದೇ, ಅವರ ವೃತ್ತಿ ಜೀವನದ ಜೊತೆಗೂ ಸಂಬಂಧ ಹೊಂದಿದ್ದಾರೆ.