ಕಡಲೂರು: ನನ್ನ ಹೆಂಡ್ತಿಯನ್ನು ಸಂಸಾರಕ್ಕೆ ಕಳುಹಿಸಿ, ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತಿರಾಯನೋರ್ವ ಕೊರಳಿನಲ್ಲಿ ನಾಡ ಬಾಂಬ್ಗಳ ಸರ ಹಾಕಿಕೊಂಡು ಅತ್ತೆ - ಮಾವನ ಎದುರು ಹೈಡ್ರಾಮಾ ನಡೆಸಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ನೈವೇಲಿಯಲ್ಲಿ ಕಂಡುಬಂದಿದೆ.
ಮಣಿಕಂಠ ಎಂಬಾತ ನಾಡ ಬಾಂಬ್ಗಳ ಸರವನ್ನು ಕೊರಳಲ್ಲಿ ಹಾಕಿಕೊಂಡು ಕೈಯಲ್ಲಿ ಪೆಟ್ರೋಲ್ ಕ್ಯಾನ್ ಹಿಡಿದುಕೊಂಡು ಪತ್ನಿ ಮನೆಗೆ ತೆರಳಿದ್ದ. ನನ್ನ ಹೆಂಡತಿಯನ್ನ ಸಂಸಾರಕ್ಕೆ ಕಳುಹಿಸಿ. ಇಲ್ಲವಾದಲ್ಲಿ ಬಾಂಬ್ಗಳನ್ನು ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅತ್ತೆ - ಮಾವನಿಗೆ ಬೆದರಿಕೆ ಹಾಕಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದ.
ಅದೇ ಸ್ಥಳದಿಂದ ಹಾದು ಹೋಗುತ್ತಿದ್ದ ಪೇದೆವೋರ್ವರು ಇದನ್ನು ಗಮನಿಸಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದರು. ವಿಷಯ ತಿಳಿದ ಅಧಿಕಾರಿಗಳು ದಿಢೀರ್ ಸ್ಥಳಕ್ಕೆ ದೌಡಾಯಿಸಿದ್ದರು.
ಪೊಲೀಸರು ಮಣಿಕಂಠನನ್ನು ಮನವೊಲಿಸಲು ಪ್ರಯತ್ನಿಸಿದರು. ಆದ್ರೆ ಮಣಿಕಂಠ ಇದಕ್ಕೆಲ್ಲ ಕಿವಿಗೊಡಲಿಲ್ಲ. ಬಳಿಕ ಮಣಿಕಂಠನ ಎರಡು ವರ್ಷದ ಮಗುವನ್ನು ಮನೆಯಿಂದ ಹೊರ ಕರೆತಂದರು. ಆಗ ಮಗುವನ್ನು ನೋಡಿದ ಮಣಿಕಂಠನ ಮನಸ್ಸು ಕರಗಿತು. ತಾನು ಹಾಕಿಕೊಂಡಿದ್ದ ಬಾಂಬ್ಗಳ ಸರವನ್ನು ತೆಗೆದ. ಅಲ್ಲದೆ ತಾನು ವಿಷ ಸೇವಿಸಿರುವುದಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕುರಿತು ಪೊಲೀಸರು ಮಣಿಕಂಠ ಮತ್ತು ಆತನ ಹೆಂಡತಿ ಕುಟುಂಬದ ಜೊತೆ ಮಾತುಕತೆ ನಡೆಸಿದ್ದಾರೆ. ಜೊತೆ ಕಚ್ಚಾ ಬಾಂಬ್ಗಳು ಎಲ್ಲಿಂದ ಬಂದವು ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.