ಬರ್ನಾಲಾ (ಪಂಜಾಬ್) : ನಿನ್ನೆ ತಡರಾತ್ರಿ ಬರ್ನಾಲಾ ನಗರದಲ್ಲಿ ಪೊಲೀಸರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಗರದ 25 ಎಕರೆ ಪ್ರದೇಶದಲ್ಲಿರುವ ರೆಸ್ಟೋರೆಂಟ್ ಬಳಿ ಘಟನೆ ನಡೆದಿದೆ. ಕಬಡ್ಡಿ ಆಟಗಾರರು ಮತ್ತು ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದ್ದು, ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಸಿಟಿ ಒನ್ ಠಾಣೆಯ ಪೊಲೀಸರು ರೆಸ್ಟೋರೆಂಟ್ನಲ್ಲಿ ಜಗಳವಾಡುತ್ತಿದ್ದ ಕಬಡ್ಡಿ ಆಟಗಾರರನ್ನು ಕಾರಿನಲ್ಲಿ ಕೂರುವಂತೆ ಹೇಳಿದ್ದಾರೆ. ಈ ವೇಳೆ, ಮತ್ತೆ ಆಟಗಾರರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.
ವಾಗ್ವಾದದ ವೇಳೆ ಪೊಲೀಸರ ಮೇಲೆ ಯುವಕರು ಹಲ್ಲೆ : ವಾಗ್ವಾದದ ವೇಳೆ ಕೋಪಗೊಂಡ ಆರೋಪಿಗಳು ಹವಲ್ದಾರ್ ದರ್ಶನ್ ಸಿಂಗ್ ಅವರಿಗೆ ಥಳಿಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಕೂಡಲೇ ಅವರನ್ನು ಬರ್ನಾಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ : ಕೋಲಾರ : ಕೂಲಿ ಹಣ ಕೇಳಿದ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ನೌಕರನ ಮೇಲೆ ಹಲ್ಲೆ ನಡೆಸಿದ ಅಂತಾರಾಷ್ಟ್ರೀಯ ಆಟಗಾರರು : ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪ್ರತ್ಯಕ್ಷದರ್ಶಿಗಳು, ಆರೋಪಿಗಳು ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರರು. ಪೊಲೀಸರಿಗೆ ಥಳಿಸಿದ ಬಳಿಕ ರೆಸ್ಟೋರೆಂಟ್ ಧ್ವಂಸಗೊಳಿಸಿದ್ದಾರೆ. ಘಟನೆ ಬಳಿಕ ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮೃತ ದರ್ಶನ್ ಸಿಂಗ್ ಅವರು ನಗರ ಠಾಣಾ 1ರಲ್ಲಿ ಬಹಳ ದಿನಗಳಿಂದ ಹವಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು. ಘಟನೆಯಿಂದ ನಗರದ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದರು.
ಇದನ್ನೂ ಓದಿ : ತುಮಕೂರು : ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ರೌಡಿಶೀಟರ್ ಬರ್ಬರ ಹತ್ಯೆ
ಪ್ರತ್ಯಕ್ಷದರ್ಶಿ ಸರಬ್ಜಿತ್ ಸಿಂಗ್ ಮಾತನಾಡಿ, "25 ಎಕರೆ ಪ್ರದೇಶದ ರೆಸ್ಟೋರೆಂಟ್ನಲ್ಲಿ ರಾತ್ರಿ ವೇಳೆ ಕೆಲವು ಕಬಡ್ಡಿ ಆಟಗಾರರು ಕುಳಿತಿದ್ದರು. ರೆಸ್ಟೋರೆಂಟ್ ಬಿಲ್ ವಿಚಾರದಲ್ಲಿ ಮಾಲೀಕರು ಹಾಗೂ ಕಬಡ್ಡಿ ಆಟಗಾರರ ನಡುವೆ ವಾಗ್ವಾದ ನಡೆಯಿತು. ಇದಾದ ನಂತರ ರೆಸ್ಟೋರೆಂಟ್ ಮಾಲೀಕರು ಸ್ಥಳದಲ್ಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಬಳಿಕ, ಸ್ಥಳಕ್ಕಾಗಮಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಆರೋಪಿಗಳು ಪೊಲೀಸ್ ಸಿಬ್ಬಂದಿ ದರ್ಶನ್ ಸಿಂಗ್ ಅವರಿಗೆ ಥಳಿಸಿ ಗಾಯಗೊಳಿಸಿದರು. ಕೂಡಲೇ ಅವರನ್ನು ಬರ್ನಾಲಾ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ ಅಲ್ಲಿ ಅವರು ನಿಧನರಾದರು. ಆರೋಪಿಗಳು ಪೊಲೀಸ್ ಸಿಬ್ಬಂದಿ ಮೇಲೆ ಮನಬಂದಂತೆ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಈ ಘಟನೆಯ ನಂತರ ಸ್ಥಳದಲ್ಲಿ ನಿಯೋಜಿಸಲಾಗಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿ ಅಲ್ಲಿಂದ ನಿರ್ಗಮಿಸಿದರು. ಇದಾದ ಬಳಿಕ ಆರೋಪಿ ಕಬಡ್ಡಿ ಆಟಗಾರರು ರೆಸ್ಟೋರೆಂಟ್ಗೆ ನುಗ್ಗಿದ್ದರು" ಎಂದು ಹೇಳಿದರು.
ಇದನ್ನೂ ಓದಿ : ಒಂಟಿ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ, ದರೋಡೆ. . ಅದೇ ಬೀದಿಯ ಮೂರು ಅಂಗಡಿಗಳಲ್ಲಿ ಸರಣಿ ಕಳ್ಳತನ