ಅಯೋಧ್ಯಾ(ಉತ್ತರಪ್ರದೇಶ): ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಮಂದಿರ ನಿರ್ಮಾಣ ಕಾರ್ಯ ಈಗ ಯಾವ ಹಂತದಲ್ಲಿದೆ?, ಏನೇನು ಕಾರ್ಯಗಳು ಆಗಿವೆ, ಯಾವ ವೇಗದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ, ಯಾವಾಗ ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಲಿದೆ ಎನ್ನುವುದರ ಕುರಿತ ಸಂಪೂರ್ಣ ವರದಿ ಇಲ್ಲಿದೆ.
ಆ. 5ರಂದು ಚಾಲನೆ: ಸನಾತನ ಧರ್ಮೀಯರ ನಂಬಿಕೆಯ ಕೇಂದ್ರ ಭಗವಾನ್ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಸರಯೂ ನದಿಯ ದಡದಲ್ಲಿರುವ ಅಯೋಧ್ಯೆಯಲ್ಲಿ ನಡೆಯುತ್ತಿದೆ. ಆ.5, 2020 ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದ್ದರು. ಅಲ್ಲಿಂದ ಎರಡು ವರ್ಷಗಳಲ್ಲಿ(ಇಂದಿಗೆ) 40 ಪ್ರತಿಶತದಷ್ಟು ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ರಾಮ ಮಂದಿರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಮಾಹಿತಿ ಹೀಗಿದೆ.
ಮಂದಿರ ಒಡೆದವರು ಯಾರು?: ಇತಿಹಾಸಕಾರರ ಪ್ರಕಾರ, 1528ರಲ್ಲಿ ದೇವಾಲಯವನ್ನು ಕೆಡವಲಾಯಿತು. ಮೊದಲ ಪಾಣಿಪತ್ ಕದನದಲ್ಲಿ ಇಬ್ರಾಹಿಂ ಲೋದಿಯನ್ನು ಸೋಲಿಸಿದ ಬಾಬರ್ ರಾಮ ಜನ್ಮಭೂಮಿಯಲ್ಲಿ ಮಸೀದಿ ನಿರ್ಮಿಸಿ ಅದಕ್ಕೆ ಬಾಬರಿ ಮಸೀದಿ ಎಂದು ಹೆಸರಿಸಲಾಯಿತು. ಮಸೀದಿ ನಿರ್ಮಾಣವಾದ ಸುಮಾರು 300 ವರ್ಷಗಳ ನಂತರ 1813ರಲ್ಲಿ ಮೊದಲ ಬಾರಿಗೆ ಹಿಂದೂ ಸಂಘಟನೆಗಳು ಬಾಬರಿ ಮಸೀದಿಯ ಮೇಲೆ ಹಕ್ಕು ಸಾಧಿಸಿದವು.
![Babri Masjid](https://etvbharatimages.akamaized.net/etvbharat/prod-images/16018908_943_16018908_1659673618937.png)
ಅಯೋಧ್ಯೆಯಲ್ಲಿ ರಾಮಮಂದಿರ ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅವರು ಪ್ರತಿಪಾದಿಸಿದರು. 72 ವರ್ಷಗಳ ನಂತರ, ಈ ವಿಷಯ ಮೊದಲ ಬಾರಿಗೆ ನ್ಯಾಯಾಲಯದ ಮೆಟ್ಟಿಲೇರಿತು. 134 ವರ್ಷಗಳ ಕಾಲ ಈ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳನ್ನು 3 ನ್ಯಾಯಾಲಯಗಳಲ್ಲಿ ಆಲಿಸಿದ ನಂತರ ಈ ಪ್ರಕರಣವನ್ನು ಸುಪ್ರೀಂಕೋರ್ಟ್ಗೆ ವರ್ಗಾಯಿಸಲಾಯಿತು.
ವಿವಾದಿತ ಕಟ್ಟಡ ಕೆಡವಿದ್ದು ಹೇಗೆ?: ಅಯೋಧ್ಯೆಯ ರಾಮಜನ್ಮ ಭೂಮಿಯ ಮೇಲಿನ ಮಂದಿರದ ಹಕ್ಕಿನ ಕುರಿತು ಹಿಂದೂ ಸಂಘಟನೆಗಳು ನಿರಂತರವಾಗಿ ಉದ್ರೇಕಗೊಳ್ಳುತ್ತಿದ್ದರು. 1934ರಲ್ಲಿ ಈ ವಿಷಯದ ಮೇಲೆ ಗಲಭೆಗಳು ಭುಗಿಲೆದ್ದವು ಮತ್ತು ಮುಸ್ಲಿಂ ಕಡೆಯವರು ಬಾಬರಿ ಮಸೀದಿ ಎಂದು ಕರೆಯುತ್ತಿದ್ದ ವಿವಾದಿತ ಕಟ್ಟಡದ ಕೆಲವು ಭಾಗವನ್ನು ಕೆಡವಲಾಯಿತು.
![construction of ram mandir](https://etvbharatimages.akamaized.net/etvbharat/prod-images/16018908_362_16018908_1659673578005.png)
1949ರಲ್ಲಿ, ಮಸೀದಿಯ ಆಕಾರದಲ್ಲಿ ಭಗವಾನ್ ರಾಮಲಾಲಾ ಅವರ ಪ್ರತಿಮೆಗಳು ಈ ರಚನೆಯೊಳಗೆ ಕಾಣಿಸಿಕೊಂಡವು. ಆದರೆ, ಹಿಂದೂಗಳು ರಾಮಲಾಲಾ ವಿಗ್ರಹಗಳನ್ನು ಮಸೀದಿಯೊಳಗೆ ತಂದಿದ್ದಾರೆ ಎಂದು ಮುಸ್ಲಿಂ ಕಡೆಯವರು ಆರೋಪಿಸಿದರು. ಈ ಘಟನೆಯ ಕೇವಲ 7 ದಿನಗಳ ನಂತರ ಫೈಜಾಬಾದ್ ನ್ಯಾಯಾಲಯ ಸಂಪೂರ್ಣ ಸಂಕೀರ್ಣವನ್ನು ವಿವಾದಿತ ಭೂಮಿ ಎಂದು ಘೋಷಿಸಿ ಅದರ ಬಾಗಿಲಿಗೆ ಬೀಗ ಹಾಕಿತು.
ಈ ಘಟನೆಯ ಒಂದು ವರ್ಷದ ನಂತರ, ಹಿಂದೂ ಮಹಾಸಭಾದ ವಕೀಲ ಗೋಪಾಲ್ ವಿಚಾರಕ್ ಅವರು ರಾಮಲಾಲ ವಿಗ್ರಹಗಳನ್ನು ಪೂಜಿಸುವ ಹಕ್ಕನ್ನು ಕೋರಿ ಫೈಜಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಇದರ ಮುಂದುವರಿದ ಭಾಗವಾಗಿ 1959ರಲ್ಲಿ, ನಿರ್ಮೋಹಿ ಅಖಾರಾ(ಹಿಂದೂ ಧಾರ್ಮಿಕ ಗುಂಪು) ವಿವಾದಿತ ಪ್ರದೇಶದ ಮಾಲೀಕತ್ವದ ಬಗ್ಗೆ ಮತ್ತೊಂದು ಪ್ರಕರಣ ದಾಖಲಿಸಿತು.
![construction of ram mandir](https://etvbharatimages.akamaized.net/etvbharat/prod-images/16018908_355_16018908_1659673525726.png)
1961ರಲ್ಲಿ ಸುನ್ನಿ ವಕ್ಫ್ ಮಂಡಳಿ ವಿವಾದಿತ ಪ್ರದೇಶದಲ್ಲಿ ಪ್ರತಿಮೆಯನ್ನು ಸ್ಥಾಪಿಸುವುದರ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತು ಮತ್ತು ಮಸೀದಿ ಮತ್ತು ಸುತ್ತಮುತ್ತಲಿನ ಭೂಮಿಯ ಮೇಲೆ ತನ್ನ ಹಕ್ಕನ್ನು ವ್ಯಕ್ತಪಡಿಸಿತು. 1986ರಲ್ಲಿ, ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರ ಪ್ರಯತ್ನದಿಂದ ಫೈಜಾಬಾದ್ ನ್ಯಾಯಾಲಯ ಬಾಬರಿ ಮಸೀದಿಯ ಬೀಗವನ್ನು ತೆರೆಯಲು ಆದೇಶ ಹೊರಡಿಸಿತು.
![construction of ram mandir](https://etvbharatimages.akamaized.net/etvbharat/prod-images/16018908_597_16018908_1659673501273.png)
ದೇಶವ್ಯಾಪಿ ಗಲಭೆ: 1987ರಲ್ಲಿ ಈ ಸಂಪೂರ್ಣ ಪ್ರಕರಣ ಫೈಜಾಬಾದ್ ಜಿಲ್ಲಾ ನ್ಯಾಯಾಲಯದಿಂದ ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸಲಾಯಿತು. ಕಾನೂನು ಹೋರಾಟದ ನಡುವೆಯೇ 1992ರ ಡಿಸೆಂಬರ್ 6ರಂದು ಇಡೀ ದೇಶದಲ್ಲಿ ಗಲಭೆಯ ಕಿಡಿ ವ್ಯಾಪಿಸಿತು. ಈ ನಡುವೆ, ಹಿಂದೂವಾದಿ ಸಂಘಟನೆಗಳು ವಿವಾದಿತ ಕಟ್ಟಡವನ್ನು ನೆಲಕ್ಕೆ ಕೆಡವಿದರು.
ರಾಮ ಮಂದಿರದ ಮೇಲಿನ ಹಕ್ಕುಗಳನ್ನು ಸಕ್ರಿಯವಾಗಿ ಪ್ರತಿಪಾದಿಸಲು 1949 ರಿಂದ ಪ್ರಾರಂಭವಾದ ಕಾನೂನು ಹೋರಾಟ ವರ್ಷದಿಂದ ವರ್ಷಕ್ಕೆ ಮುಂದುವರೆಯಿತು. ಈ ಸಂದರ್ಭದಲ್ಲಿ, ವಿವಾದಿತ ಪ್ರದೇಶದಲ್ಲಿ ತಮ್ಮ ಹಕ್ಕು ಮಂಡಿಸಿದ ಇನ್ನೂ ಅನೇಕ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ಮೊಕದ್ದಮೆ ಹೂಡಿದವು. ಅಂತಿಮವಾಗಿ 1992ರಲ್ಲಿ ಕಟ್ಟಡವನ್ನು ಉರುಳಿಸಲಾಯಿತು.
3 ಸಮಾನ ಭಾಗಗಳಾಗಿ ವಿಂಗಡಿಸಲು ಆದೇಶ: 2010ರಲ್ಲಿ, ಅಲಹಾಬಾದ್ ಹೈಕೋರ್ಟ್ ಈ ವಿಷಯದ ಬಗ್ಗೆ ತೀರ್ಪು ನೀಡುವಾಗ ವಿವಾದಿತ ಸ್ಥಳವನ್ನು ಸುನ್ನಿ ವಕ್ಫ್ ಬೋರ್ಡ್, ರಾಮಲಾಲಾ ವಿರಾಜಮಾನ್ ಮತ್ತು ನಿರ್ಮೋಹಿ ಅಖಾರಾ ನಡುವೆ ಮೂರು ಸಮಾನ ಭಾಗಗಳಾಗಿ ವಿಂಗಡಿಸಲು ಆದೇಶ ನೀಡಿತು. ಆದರೆ, ಮುಸ್ಲಿಂ ಕಡೆಯವರು ಈ ನಿರ್ಧಾರದಿಂದ ತೃಪ್ತರಾಗಲಿಲ್ಲ. ಬದಲಿಗೆ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದರು.
![construction of ram mandir](https://etvbharatimages.akamaized.net/etvbharat/prod-images/16018908_991_16018908_1659673482348.png)
2011ರಲ್ಲಿ ಅಯೋಧ್ಯೆ ವಿವಾದದ ಕುರಿತು ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿತು. ಆಗ ಮತ್ತೊಮ್ಮೆ ಇಡೀ ಪ್ರಕರಣದ ವಿಚಾರಣೆ ಪ್ರಾರಂಭವಾಯಿತು. ಏತನ್ಮಧ್ಯೆ 2017 ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಲಯದ ಹೊರಗೆ ಇತ್ಯರ್ಥಕ್ಕೆ ಕರೆ ನೀಡಿತ್ತು. ಆದರೆ, ವಿಷಯವು ಕಾರ್ಯರೂಪಕ್ಕೆ ಬರಲಿಲ್ಲ.
ನ್ಯಾಯವೇನು?: ಮಾ.8, 2019ರಂದು, ಸುಪ್ರೀಂ ಕೋರ್ಟ್ ಈ ವಿಷಯವನ್ನು ಮಧ್ಯಸ್ಥಿಕೆ ವಹಿಸಲು ಸಮಿತಿಯನ್ನು ಕಳುಹಿಸಿ 8 ವಾರಗಳಲ್ಲಿ ಸಂಪೂರ್ಣ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸೂಚಿಸಿತು. 1 ಆಗಸ್ಟ್ 2019ರಂದು, ಮಧ್ಯಸ್ಥಿಕೆ ಸಮಿತಿ ನ್ಯಾಯಾಲಯದ ಮುಂದೆ ತನ್ನ ವರದಿಯನ್ನು ಸಲ್ಲಿಸಿತು.
2 ಆಗಸ್ಟ್ 2019 ರಂದು, ಮಧ್ಯಸ್ಥಿಕೆ ಸಮಿತಿಯು ಈ ವಿಷಯಕ್ಕೆ ಪರಿಹಾರವನ್ನು ಕಂಡುಕೊಳ್ಳಲು ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಬಳಿಕ ಅಯೋಧ್ಯೆ ಪ್ರಕರಣದ ದೈನಂದಿನ ವಿಚಾರಣೆ 6 ಆಗಸ್ಟ್ 2019 ರಿಂದ ಸುಪ್ರೀಂಕೋರ್ಟ್ನಲ್ಲಿ ಪ್ರಾರಂಭವಾಯಿತು.
16 ಅಕ್ಟೋಬರ್ 2019 ರಂದು, ಅಯೋಧ್ಯೆ ಪ್ರಕರಣದ ವಿಚಾರಣೆ ಪೂರ್ಣಗೊಂಡು ತೀರ್ಪು ಕಾಯ್ದಿರಿಸಿತು. ಬಳಿಕ 9 ನವೆಂಬರ್ 2019 ರಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದಲ್ಲಿ ಇಡೀ ಭೂಮಿ ರಾಮಲಾಲಾಗೆ ಸೇರಿದ್ದು ಎಂದು ತೀರ್ಪು ಪ್ರಕಟಿಸಲಾಯಿತು.
ಅದು ಸುಮಾರು 400 ವರ್ಷಗಳ ಸುದೀರ್ಘ ಹೋರಾಟದ ನಂತರ ರಾಮ ಭಕ್ತರಿಗೆ ನ್ಯಾಯ ದೊರಕಿದ ಐತಿಹಾಸಿಕ ದಿನವಾಗಿತ್ತು. ಪೀಠದಲ್ಲಿ ನ್ಯಾಯಮೂರ್ತಿ ಎಸ್.ಎ ಬೋಬ್ಡೆ, ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಇದ್ದರು.
ಮಸೀದಿಗೆ ಜಮೀನು ನೀಡುವಂತೆ ಸೂಚನೆ: ಮಸೀದಿಗೆ ಅಯೋಧ್ಯೆಯಿಂದ ಸ್ವಲ್ಪ ದೂರದಲ್ಲಿ ಜಮೀನು ನೀಡುವಂತೆ ಸೂಚನೆ ನೀಡಲಾಯಿತು. ರಾಮ ಮಂದಿರ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ನಂತರ ನ್ಯಾಯಾಲಯದ ನಿರ್ದೇಶನದಂತೆ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ರಚಿಸಲಾಗಿದ್ದು, ಅದರಲ್ಲಿ ಪ್ರಮುಖ ದೇಶದ ಸಂತರು ಮತ್ತು ಧಾರ್ಮಿಕ ಮುಖಂಡರಿದ್ದಾರೆ.
![construction of ram mandir](https://etvbharatimages.akamaized.net/etvbharat/prod-images/16018908_262_16018908_1659673461508.png)
ಮಂದಿರ ನಿರ್ಮಾಣಕ್ಕಾಗಿ 'ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ' ಟ್ರಸ್ಟ್ ಅನ್ನು ರಚಿಸಲಾಗಿದೆ. ಸುಪ್ರೀಂಕೋರ್ಟ್ನ ತೀರ್ಪು ಬಂದ ಸುಮಾರು 9 ತಿಂಗಳ ನಂತರ, ಪ್ರಧಾನಿ ನರೇಂದ್ರ ಮೋದಿ ರಾಮಜನ್ಮಭೂಮಿ ಸಮುಚ್ಚಯಕ್ಕೆ ಭೂಮಿ ಪೂಜೆ ಸಲ್ಲಿಸಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಂದಿರ ನಿರ್ಮಾಣ ಕಾರ್ಯ ಆರಂಭವಾಯಿತು.
ಶೇ.40ರಷ್ಟು ನಿರ್ಮಾಣ ಕಾರ್ಯ ಪೂರ್ಣ: 2020ರ ಆ.5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯದ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ ನಂತರ, ಇಲ್ಲಿಯವರೆಗೆ ಸುಮಾರು ಶೇ.40ರಷ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ದೇವಾಲಯದ ಅಡಿಪಾಯ ಸಿದ್ಧವಾದ ನಂತರ, 21 ಅಡಿ ಎತ್ತರದ ನೆಲವನ್ನು ಸಿದ್ಧಪಡಿಸಲಾಗಿದೆ.
![construction of ram mandir](https://etvbharatimages.akamaized.net/etvbharat/prod-images/16018908_953_16018908_1659673549646.png)
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಪ್ರಕಾರ, ಗರ್ಭಗುಡಿಯಲ್ಲಿ ಕೆತ್ತಲಾದ ರಾಜಸ್ಥಾನದ ಪಿಂಕ್ ಸ್ಯಾಂಡ್ ಸ್ಟೋನ್ ಅನ್ನು ಸೇರಿಸುವ ಪ್ರಕ್ರಿಯೆ ತ್ವರಿತ ಗತಿಯಲ್ಲಿ ಪ್ರಾರಂಭವಾಗಿದೆ. ಇದರೊಂದಿಗೆ 3 ದಿಕ್ಕುಗಳಲ್ಲಿ ದೇವಾಲಯದ ರಕ್ಷಣೆಗಾಗಿ ಸಿದ್ಧಪಡಿಸಲಾಗುತ್ತಿರುವ ತಡೆಗೋಡೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ದೇವಾಲಯದ ನಿರ್ಮಾಣಕ್ಕಾಗಿ ನೆಲದಡಿಯಲ್ಲಿ ನಡೆಯಬೇಕಾದ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ದೇವಾಲಯದ ನಿರ್ಮಾಣ ಮತ್ತು ಶಿಖರ ನಿರ್ಮಾಣವು ನೆಲ ಅಂತಸ್ತಿನಲ್ಲಿ ನಡೆಯಲಿದೆ. ದೇವಾಲಯದ ನಿರ್ಮಾಣದಲ್ಲಿ ಸ್ತಂಭದ ನಿರ್ಮಾಣ ಕಾರ್ಯವು 3 ಕ್ವಾರ್ಟರ್ಸ್ ಪೂರ್ಣಗೊಂಡಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಜೂ.1 ರಂದು ಗರ್ಭಗುಡಿಯ ಪಶ್ಚಿಮದಲ್ಲಿ ಅರ್ಧಚಂದ್ರಾಕಾರದಲ್ಲಿ ಕೆತ್ತಲಾದ ಬಂಸಿ ಪಹರಪುರದ ಗುಲಾಬಿ ಬಣ್ಣದ ಮರಳುಗಲ್ಲುಗಳ ಸ್ಥಾಪನೆ ಪ್ರಾರಂಭಿಸಲಾಗಿದೆ. ಎರಡು ತಿಂಗಳಲ್ಲಿ ಗರ್ಭಗುಡಿಯ ಪಶ್ಚಿಮ ಭಾಗದಲ್ಲಿ 250ಕ್ಕೂ ಹೆಚ್ಚು ಕೆತ್ತನೆಯ ಕಲ್ಲಿನ ಪದರಗಳನ್ನು ಸಂಪೂರ್ಣವಾಗಿ ಅಳವಡಿಸಲಾಗಿದೆ.
ಡಿ.2023 ರೊಳಗೆ ರಾಮಲಾಲವನ್ನು ಗರ್ಭಗುಡಿಯಲ್ಲಿ ಸ್ಥಾಪಿಸಲು ಸಿದ್ಧತೆ ನಡೆಸಲಾಗುತ್ತಿದೆ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 2025ರ ವೇಳೆಗೆ ಸಂಪೂರ್ಣ ರಾಮ ಜನ್ಮಭೂಮಿ ಸಂಕೀರ್ಣದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಯೋಜನೆಯನ್ನು ಹೊಂದಿದ್ದು, ಇದಕ್ಕಾಗಿ ಹಗಲಿರುಳು ಕೆಲಸ ಮಾಡಲಾಗುತ್ತಿದೆ.
ಇದನ್ನೂ ಓದಿ: 2024ರ ಮಕರ ಸಂಕ್ರಾಂತಿಗೆ ಅಯೋಧ್ಯೆಯಲ್ಲಿ ರಾಮಮಂದಿರ ಕಾರ್ಯ ಪೂರ್ಣ: ಪೇಜಾವರ ಶ್ರೀ