ಹೈದರಾಬಾದ್: ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ಮತದಾನದಕ್ಕೆ ದಿನಗಣನೆ ಆರಂಭವಾಗಿದೆ. ಇದರ ನಡುವೆಯೇ ಅಭ್ಯರ್ಥಿಗಳು ಮತ್ತು ನಾಯಕರು ತಮ್ಮ ಪಕ್ಷಗಳ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅದರಲ್ಲೂ ಈ ಬಾರಿಯ ಚುನಾವಣೆಯಲ್ಲಿ ಬಿಆರ್ಎಸ್ ಪಕ್ಷಕ್ಕೆ ಕಾಂಗ್ರೆಸ್ ಪ್ರಬಲ ಪೈಪೋಟಿಯೊಡ್ಡುತ್ತಿದೆ ಎಂಬುದು ರಾಜಕೀಯ ವಿಶ್ಲೇಷಕರ ಮಾತಾಗಿದೆ.
ಈ ಹಿನ್ನೆಲೆ ಮತ್ತೊಮ್ಮೆ ಅಧಿಕಾರದ ಗದ್ದುಗೆಗೇರಲು ಹಾಲಿ ಸಿಎಂ ಕೆಸಿಆರ್ ನೇತೃತ್ವದ ಬಿಆರ್ ಎಸ್ ಪಕ್ಷ ರಣತಂತ್ರ ರೂಪಿಸಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಮತ್ತೊಂದೆಡೆ ಕಾಂಗ್ರೆಸ್ ಕೂಡ ಈ ಬಾರಿ ಶತಾಯಗತಾ ಅಧಿಕಾರಕ್ಕೇರಬೇಕೆಂದು ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕೇಂದ್ರದ ಕಾಂಗ್ರೆಸ್ ನಾಯಕರು ಕೂಡ ರಾಜ್ಯಕ್ಕೆ ಆಗಮಿಸಿ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ.
ಇದರ ನಡುವೆಯೇ ಕೆಲವೆಡೆ ಮತದಾರರನ್ನು ಸೆಳೆಯಲು ಉಡುಗೊರೆಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ. ಉತ್ತರ ತೆಲಂಗಾಣ ಕ್ಷೇತ್ರದ ಅಭ್ಯರ್ಥಿಯೊಬ್ಬರು ತಮ್ಮ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವಂತೆ ಪ್ರತಿಯೊಬ್ಬ ಮಹಿಳೆಯರಿಗೆ ರೇಷ್ಮೆ ಸೀರೆ ಉಡುಗೊರೆಯಾಗಿ ನೀಡುತ್ತಿದ್ದಾರಂತೆ. ಅಲ್ಲದೆ ಕಳೆದ ತಿಂಗಳು ದಸರಾದಂದು ಪ್ರತಿ ಇಪ್ಪತ್ತು ಜನರಿಗೆ ಆಡುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಜತೆಗೆ ಕೆಲ ಗ್ರಾಮಗಳಲ್ಲಿನ ಸರಪಂಚರು ಹಾಗೂ ಎಂಪಿಟಿಸಿ ಸದಸ್ಯರಿಗೆ ಚಿನ್ನಾಭರಣದ ಜತೆಗ ಮನೆಗೊಂದು ಕುಕ್ಕರ್ ಕೂಡ ವಿತರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಭ್ಯರ್ಥಿಯೊಬ್ಬರು ಇದುವರೆಗೆ ರೂ.20 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮತೊಂದೆಡೆ ಆಂಧ್ರಪ್ರದೇಶ ಗಡಿ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಸೋಲಾರ್ ವಿದ್ಯುದೀಪಗಳ ವಿತರಣೆ, ದೇವಸ್ಥಾನ ನಿರ್ಮಾಣ, ವ್ಯಾಯಾಮ ಶಾಲೆಗಳ ನಿರ್ಮಾಣ ಸೇರಿ 30 ಕೋಟಿ ರೂ.ವರೆಗೆ ಖರ್ಚು ಮಾಡಿದ್ದಾರೆ ಎಂದು ಗಡಿ ಜಿಲ್ಲೆಯ ಗ್ರಾಮಸ್ಥರು ಹೇಳಿದ್ದಾರೆ.
ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಹಣದ ಹಂಚಿಕೆ ಕೂಡ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅದರಲ್ಲೂ ಪ್ರಬಲ ಅಭ್ಯರ್ಥಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಸ್ಪರ್ಧಿಸುತ್ತಿರುವ ಕ್ಷೇತ್ರಗಳಲ್ಲಿ ಮತದಾರರನ್ನು ಸೆಳೆಯಲು ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗುತ್ತಿದೆ. ಅಲ್ಲದೆ ಮತದಾನಕ್ಕೆ ಕೇವಲ 9 ದಿನ ಮಾತ್ರ ಬಾಕಿ ಉಳಿದಿದ್ದು, ಕೆಲವೆಡೆ 20ರಿಂದ 30 ಕೋಟಿ ರೂ. ಜೊತೆಗೆ, ಸಭೆಗಳಿಗೆ ಜನರನ್ನು ಸೇರಿಸಲು ಸಾರ್ವಜನಿಕ ಸಾರಿಗೆ ವೆಚ್ಚ, ಪ್ರಚಾರ, ವಾಹನ ವೆಚ್ಚಗಳನ್ನು ಅಭ್ಯರ್ಥಿಗಳು ವ್ಯಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿ: ಸಿಎಂ ಗೆಹ್ಲೋಟ್ ಒಬ್ಬ 'ಜಾದೂಗಾರ', ಕೆಂಪು ಡೈರಿಯಲ್ಲಿ ಸರ್ಕಾರದ ಕರ್ಮಕಾಂಡ: ಪ್ರಧಾನಿ ಮೋದಿ ಆರೋಪ