ನವದೆಹಲಿ: ನೀವು ಕೆಲವೊಮ್ಮೆ ಬಸ್ಗಳಲ್ಲಿ ಜಗಳ, ಹೊಡೆದಾಟದಂತ ಘಟನೆಗಳನ್ನು ನೋಡಿರಬಹುದು. ಈಗ ಇಂತಹ ಪ್ರಕರಣಗಳು ಏರ್ ಬಸ್ನಲ್ಲಿ ಹೆಚ್ಚಾಗಿ ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ವಿಮಾನದಲ್ಲಿ ಹೊಡೆದಾಟದ ಪ್ರಕರಣಗಳು ದಾಖಲಾಗುತ್ತಿವೆ. ಅಷ್ಟೇ ಅಲ್ಲ, ವಿಮಾನಯಾನ ಸಂಸ್ಥೆ ಎಷ್ಟೇ ಕಠಿಣ ಕ್ರಮಗಳನ್ನು ತೆಗೆದುಕೊಂಡರೂ ಸಹ ಇಂತಹ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ. ಇತ್ತೀಚೆಗೆ ಜಗಳವಾಗಿರುವ ಘಟನೆ ಏರ್ ಇಂಡಿಯಾ ವಿಮಾನದಲ್ಲಿ ಕಂಡು ಬಂದಿದ್ದು, ಘಟನೆ ಬಳಿಕ ವಿಮಾನ ದೆಹಲಿಗೆ ಹಿಂದಿರುಗಿದೆ.
ಹೌದು, ಏರ್ ಇಂಡಿಯಾದ ದೆಹಲಿ ಲಂಡನ್ AI-111 ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ವಾಪಸ್ ಆಗಿದೆ. ಕಾರಣ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಸಿಬ್ಬಂದಿಯೊಂದಿಗೆ ಜಗಳವಾಡಿದ್ದು, ಏರ್ ಇಂಡಿಯಾ ಕೂಡ ಇದನ್ನು ಖಚಿತಪಡಿಸಿದೆ. ಘಟನೆ ಕುರಿತು ವಿಮಾನಯಾನ ಸಂಸ್ಥೆ ದೆಹಲಿ ವಿಮಾನ ನಿಲ್ದಾಣ ಪೊಲೀಸರಿಗೆ ದೂರು ನೀಡಿದ್ದು, ಗಲಾಟೆ ಸೃಷ್ಟಿಸಿದ್ದ ಪ್ರಯಾಣಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿರುವ ಪೊಲೀಸ್ ಠಾಣೆಯಲ್ಲಿ ಜಗಳವಾಡಿದ ಪ್ರಯಾಣಿಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ವಿವರ.. ಸೋಮವಾರ ಏರ್ ಇಂಡಿಯಾದ ದೆಹಲಿ-ಲಂಡನ್ ವಿಮಾನವು ದೆಹಲಿಯಿಂದ ಲಂಡನ್ಗೆ ಬೆಳಗ್ಗೆ 6.35 ರ ಸುಮಾರಿಗೆ ಟೇಕ್ ಆಫ್ ಆಗಿತ್ತು. ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ಪ್ರಯಾಣಿಕರೊಬ್ಬರು ವಿಮಾನದಲ್ಲಿ ಜಗಳ ಆರಂಭಿಸಿದರು. ಈ ಮಾತಿನ ಚಕಮಕಿ ವೇಳೆ ಪ್ರಯಾಣಿಕ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಪ್ರಯಾಣಿಕನ ಜನಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಪೈಲಟ್ ವಿಮಾನವನ್ನು ದೆಹಲಿಗೆ ತರಲು ನಿರ್ಧರಿಸಿದರು. ಹೀಗಾಗಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ಆಗಿತ್ತು. ಇಂದು ಮಧ್ಯಾಹ್ನಕ್ಕೆ ವಿಮಾನದ ವೇಳಾಪಟ್ಟಿಯನ್ನು ಮರು ನಿಗದಿಪಡಿಸಲಾಗಿದ್ದು, ದೆಹಲಿಯಿಂದ ಫ್ಲೈಟ್ ನಿರ್ಗಮಿಸಲಿದೆ. ಈ ಸಂಬಂಧ ಪೊಲೀಸರು ಎಫ್ಐಆರ್ ಕೂಡ ದಾಖಲಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಏರ್ ಇಂಡಿಯಾ ಕೂಡ ಹೇಳಿಕೆ ನೀಡಿದೆ. ದೆಹಲಿ-ಲಂಡನ್ ಹೀಥ್ರೂಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-111 ಪ್ರಯಾಣಿಕನ ಅಶಿಸ್ತಿನ ವರ್ತನೆಯಿಂದಾಗಿ ಟೇಕ್ ಆಫ್ ಆದ ಕೂಡಲೇ ದೆಹಲಿಗೆ ಮರಳಿದೆ ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಯಾಣಿಕರಿಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಗಲಾಟೆ ಮುಂದುವರಿಸಿದರು. ಕ್ಯಾಬಿನ್ ಸಿಬ್ಬಂದಿಯ ಇಬ್ಬರು ಸದಸ್ಯರಿಗೂ ಗಾಯಗಳಾಗಿವೆ. ಪೈಲಟ್ ಇನ್ ಕಮಾಂಡ್ ದೆಹಲಿಗೆ ಮರಳಲು ನಿರ್ಧರಿಸಿದರು ಮತ್ತು ಜಗಳ ತೆಗೆದ ಪ್ರಯಾಣಿಕನನ್ನು ಇಳಿಸಿದ ನಂತರ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ವಿಮಾನವನ್ನು ಮಧ್ಯಾಹ್ನಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಏರ್ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಓದಿ: ಕಮಲದ ರೂಪದಲ್ಲಿರುವ ಶಿವಮೊಗ್ಗ ವಿಮಾನ ಟರ್ಮಿನಲ್: ಹೊದಿಕೆ ಹಾಕುವಂತೆ ಚುನಾವಣಾ ಅಧಿಕಾರಿಗಳಿಗೆ ಮನವಿ