ನವದೆಹಲಿ: ನಗರದ ಶಾಹೀನ್ ಬಾಗ್ ಪ್ರದೇಶದಲ್ಲಿ ಕೆಲ ದಿನಗಳಿಂದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ತೆರವು ಕಾರ್ಯಾಚರಣೆ ಕೈಗೊಂಡಿದೆ. ಈ ದಿನವೂ ದೆಹಲಿ ಪೊಲೀಸ್ ನೇತೃತ್ವದಲ್ಲಿ ಎಂಸಿಡಿ ತೆರವು ಕಾರ್ಯಾಚರಣೆ ಕೈಗೊಂಡಿತ್ತು. ಆದರೆ ಸ್ಥಳೀಯ ಜನ ತೆರವು ಕಾರ್ಯಾಚರಣೆ ವಿರೋಧಿಸಿ ಪ್ರತಿಭಟನೆ ಕೈಗೊಂಡಿತ್ತು. ಈ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಭಾಗಿಯಾಗಿ ಸ್ಥಳೀಯರಿಗೆ ಸಾಥ್ ನೀಡಿದರು.
ಎಎಪಿ ಪಕ್ಷದ ಶಾಸಕ ಖಾನ್ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಕ್ರಮವನ್ನು ವಿರೋಧಿಸಿ ಸ್ಥಳೀಯರೊಂದಿಗೆ ಸೇರಿ ಪ್ರತಿಭಟನೆ ಮುನ್ನಡೆಸಿದರು. ಇದಕ್ಕೂ ಮುನ್ನ ತೆರುವು ಕಾರ್ಯಾಚರಣೆಗೆ ತಂದಿದ್ದ ಬುಲ್ಡೋಜರ್ಗಳನ್ನು ತಡೆಯಲು ಸ್ಥಳೀಯರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಕೈಗೊಂಡಿದ್ದರು.
ಈ ವೇಳೆ ಮಾತನಾಡಿದ ಶಾಸಕ ಖಾನ್, ಇಲ್ಲಿನ ಮಸೀದಿಯ ಹೊರಗಿರುವ ವಾಜು ಖಾನಾ ಮತ್ತು ಶೌಚಾಲಯಗಳನ್ನು ಈ ಹಿಂದೆ ಪೊಲೀಸರ ಸಮ್ಮುಖದಲ್ಲಿ ತೆರವು ಮಾಡಲಾಗಿತ್ತು. ಯಾವುದೇ ಅತಿಕ್ರಮಣ ಇಲ್ಲದಿರುವಾಗ ಅವರು ಇಲ್ಲಿಗೆ ಏಕೆ ಬಂದಿದ್ದಾರೆ? ಕೇವಲ ರಾಜಕೀಯ ಮಾಡುವುದ್ದಕ್ಕಾಗಿಯಾ? ಎಂದು ಪ್ರಶ್ನಿಸಿದರು.
ಓದಿ: ಬುಲ್ಡೋಜರ್ಗಳು ಅನ್ಸಾರ್, ಅಹಮದ್ ಮೇಲೆ ಕೆಲಸ ಮಾಡ್ತವೆ; ಅರ್ಜುನ್, ಅಜಯ್ ಮೇಲಲ್ಲ: ಓವೈಸಿ
ಎಂಸಿಡಿ ಶಾಂತ ವಾತಾವರಣವನ್ನು ಹದಗೆಡೆಸಲು ಪ್ರಯತ್ನಿಸುತ್ತಿದೆ. ಈ ಪ್ರದೇಶದಲ್ಲಿ ಎಲ್ಲ ಒತ್ತುವರಿ ತೆರುವುಗೊಳಿಸಿದಾಗಿದೆ. ಆದರೆ ಎಂಸಿಡಿ ಮತ್ತೆ ಬಂದಿದೆ. ನನ್ನ ಕ್ಷೇತ್ರದಲ್ಲಿ ಒತ್ತುವರಿ ಆಗಿದ್ದರೆ ಹೇಳಿ. ನಾನೇ ಮುಂದೆ ನಿಂತು ತೆರುವುಗೊಳಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಮುಂಜಾನೆ ದೆಹಲಿ ಪೊಲೀಸ್ ಸಿಬ್ಬಂದಿ ಸಹಾಯದಿಂದ ಈ ಪ್ರದೇಶದಲ್ಲಿ ಎಂಸಿಡಿ ಅತಿಕ್ರಮಣಗೊಂಡ ಪ್ರದೇಶವನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡಿತ್ತು. ಇದನ್ನು ವಿರೋಧಿಸಿ ಇಲ್ಲಿನ ಜನ ಪ್ರತಿಭಟನೆ ಕೈಗೊಂಡಿದ್ದರು.