ಹಿಂದೂಪುರ (ಆಂಧ್ರಪ್ರದೇಶ): ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರದ ದಂಪತಿ, ಫಿಲಿಪೈನ್ಸ್ನಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ ಮಗಳ ಎಂಬಿಬಿಎಸ್ ಶುಲ್ಕ ಪಾವತಿಸಲು ತಮ್ಮ ಕಿಡ್ನಿ ಮಾರಾಟ ಮಾಡಲು ಅನುಮತಿ ಕೋರಿ ಅನಂತಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಜ್ಞಾದಮ್ ಚಂದ್ರಡು ಅವರಿಗೆ ಪತ್ರ ಬರೆದಿದ್ದಾರೆ.
ಹಿಂದೂಪುರದ ಮಕ್ಬುಲ್ ಜಾನ್ ಮತ್ತು ಅಯೂಬ್ ಖಾನ್ ದಂಪತಿಗೆ ರೂಬಿಯಾ ಎಂಬ ಮಗಳಿದ್ದಾಳೆ. ಆಕೆ ಫಿಲಿಪೈನ್ಸ್ನ ಡೌವೊಸ್ ನಗರದಲ್ಲಿ ಎಂಬಿಬಿಎಸ್ ಓದುತ್ತಿದ್ದಾಳೆ.
ರೂಬಿಯಾ ತಾಯಿ ಮಕ್ಬುಲ್ ಜಾನ್ ಮಾತನಾಡಿ, ನನ್ನ ಮಗಳು ಫಿಲಿಪೈನ್ಸ್ಗೆ ಹೋಗಿ 16 ತಿಂಗಲು ಕಳೆದಿವೆ. ಆ ಸಂದರ್ಭದಲ್ಲಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಸರ್ಕಾರದಿಂದ 10 ಲಕ್ಷ ವಿದೇಶಿ ವಿದ್ಯಾರ್ಥಿ ವೇತನ ಘೋಷಿಸಲಾಗಿತ್ತು. ಆ ನಂತರ, ಸಿಎಂ ಜಗನ್ ಮೋಹನ್ ಸರ್ಕಾರದಿಂದ 15 ಲಕ್ಷ ನೀಡುವುದಾಗಿ ಜಾಹೀರಾತು ನೀಡಲಾಗಿತ್ತು. ಆ ಧೈರ್ಯದಿಂದಲೇ ನಾವು ಮಗಳನ್ನು ವಿದೇಶಕ್ಕೆ ಕಳುಹಿಸಿದೆವು. ಆಕೆ ಫಿಲಿಪೈನ್ಸ್ ತೆರಳಿದ ಬಳಿಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿದೆವು. ಬಳಿಕ ವಿದ್ಯಾರ್ಥಿ ವೇತನ ರದ್ದುಗೊಳಿಸಿರುವುದಾಗಿ ಮೆಸೇಜ್ ಕಳುಹಿಸಲಾಯಿತು. ಅಂದಿನಿಂದ ಇಂದಿನವರೆಗೆ ಮಗಳ ಶಿಕ್ಷಣಕ್ಕೆ ನೆರವಾಗುವಂತೆ ಅನೇಕ ರಾಜಕಾರಣಿಗಳು ಹೋದರೂ ಯಾರೂ ಸಹಾಯ ಮಾಡಲಿಲ್ಲ. ಇದಕ್ಕಾಗಿ ನಾನು ಉಪವಾಸ ಸತ್ಯಾಗ್ರಹ ಸಹ ನಡೆಸಿದ್ದು, ಸ್ಥಳೀಯ ತಹಶೀಲ್ದಾರ್ ನಮ್ಮ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದರು.
ಆದರೆ, ಈವರೆಗೂ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದೀಗ ಬೇರೆ ಮಾರ್ಗಗಳಿಲ್ಲದೇ, ಮಗಳ ಓದಿಗಾಗಿ ನಮ್ಮ ಮೂತ್ರಪಿಂಡಗಳನ್ನು ಮಾರಲು ನಿರ್ಧರಿಸಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಕಿಡ್ನಿ ಮಾರಲು ಅನುಮತಿ ನೀಡಬೇಕು. ಇಲ್ಲದಿದ್ದರೆ, ಸರ್ಕಾರ ನಮ್ಮ ಮಗಳ ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ