ಕೊಪ್ಪಳ: ಬಿಜೆಪಿ ಅಭ್ಯರ್ಥಿಯಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಇಚ್ಛಿಸಿದ್ದೇನೆ ಎಂದು ಸಂಸದ ಸಂಗಣ್ಣ ಕರಡಿ ತಮ್ಮ ಬಯಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇಂದು ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿಯಿಂದ ನನಗೆ ಟಿಕೇಟ್ ಸಿಗುತ್ತದೆ ಎಂಬ ವಿಶ್ವಾಸವಿದೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ರಾಜ್ಯ ಮುಖಂಡರು ನನಗೆ ಟಿಕೆಟ್ ಕೊಡುವಂತೆ ಪಕ್ಷದ ಹೈಮಾಂಡ್ಗೆ ಹೆಚ್ಚಿನ ಒತ್ತಡ ಹೇರಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಹೀಗಾಗಿ ನಾನೂ ಸಹ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದು ನಿರ್ಧಾರ ಮಾಡಿದ್ದೇನೆ. ಈಗಾಗಲೇ ಪಕ್ಷದ ಸಂಸದೀಯ ಮಂಡಳಿಯಲ್ಲಿ ಟಿಕೆಟ್ ಕುರಿತು ನಿರ್ಧಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಂಪಿಗಳಿಗೆ ಕೊಡಬೇಕು ಅಥವಾ ಬೇಡವೋ ಹೈಕಮಾಂಡ್ ನಿರ್ಣಯ ಮಾಡುತ್ತದೆ. ಆಯಾ ಕ್ಷೇತ್ರದ ಇಶ್ಯೂಗಳು ಬೇರೆ ಬೇರೆ ಇರುತ್ತವೆ. ಪ್ರತಿಯೊಬ್ಬರಿಗೂ ಎಂಎಲ್ಎ ಆಗಬೇಕು ಅನ್ನುವುದು ಆಸೆ ಇರುತ್ತದೆ. ಇಡೀ ಜಿಲ್ಲೆ, ಕ್ಷೇತ್ರದ ವ್ಯಾಪ್ತಿಯ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿ ಎನ್ನುವುದು ಕಾರ್ಯಕರ್ತರ ಒತ್ತಡವೂ ಇರುತ್ತದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಬೇಕು: ನಾನೂ ಈಗ ಮೋದಿ ನೇತೃತ್ವದ ಸರ್ಕಾರದಲ್ಲಿ ಎಂಪಿ ಆಗಿರುವುದು ನನಗೆ ತೃಪ್ತಿ ಇದೆ. ಆದರೆ ನನಗೆ ಕೊಪ್ಪಳ ವಿಧಾನಸಭೆ ಟಿಕೆಟ್ ಕೊಟ್ಟರೆ ಜಿಲ್ಲೆಯಲ್ಲಿ ಪಕ್ಷವೂ ಇನ್ನಷ್ಟು ಬಲಿಷ್ಠ ಆಗುತ್ತದೆ. ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಿದೆ, ಅದನ್ನು ಗಟ್ಟಿಯಾಗಿ ಉಳಿಸಿಕೊಂಡು ಹೋಗಬೇಕು. ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಬೇಕು. ಡಬಲ್ ಎಂಜಿನ್ ಸರ್ಕಾರ ಆಡಳಿತ ನಡೆಸಬೇಕು ಎಂದು ಕರಡಿ ತಿಳಿಸಿದರು.
ಕೊಪ್ಪಳ ಅಭಿವೃದ್ಧಿಗೆ ಸ್ಪರ್ಧೆ: ಕೊಪ್ಪಳ ಜಿಲ್ಲೆಯಾಗಿ 25 ವರ್ಷ ಕಳೆದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಬೃಹತ್ ಯೋಜನೆಗಳು ಜಿಲ್ಲೆಗೆ ಬಂದು ಅಭಿವೃದ್ಧಿ ಸಾಧಿಸಬೇಕು. ಆ ಕಾರಣಕ್ಕಾಗಿ ನಾನು ರಾಜ್ಯ ರಾಜಕಾರಣಕ್ಕೆ ಬರಬೇಕು ಎಂದು ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ ಎಂದು ಸಂಸದರು ತಿಳಿಸಿದರು.
ಟಿಕೆಟ್ ಸಿಗುವುದು ಖಾತ್ರಿ: ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ. ನನಗೆ ಟಿಕೆಟ್ ನೀಡಿದರೆ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಸಹಕಾರವಾಗಲಿದೆ ಎಂದು ಪಕ್ಷದ ಮುಖಂಡರು ರಾಜ್ಯ ನಾಯಕರಿಗೆ ಮನವರಿಕೆ ಮಾಡಿದ್ದಾರೆ. ಸಿ ಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಸಂಘಟನಾ ಬಿ.ಎಲ್. ಸಂತೋಷ್, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿದ್ದೇನೆ. ಅವರು ಸಹ ಧನಾತ್ಮಕವಾಗಿ ಮಾತನಾಡಿದ್ದಾರೆ ಎಂದು ಸಂಸದ ಕರಡಿ ಹೇಳಿದರು.
ಹಾಗೊಂದು ವೇಳೆ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ನಿಮ್ಮ ನಿಲುವೇನು ಎಂಬ ಪ್ರಶ್ನೆಗೆ ಪ್ರತ್ರಿಕ್ರಿಯಿಸಿದ ಅವರು, ಈ ಕುರಿತಂತೆ ಈಗಲೇ ಏನನ್ನು ಹೇಳುವುದಿಲ್ಲ. ಪಕ್ಷ ನನಗೆ ಟಿಕೆಟ್ ನೀಡಲಿದೆ ಎಂದಷ್ಟೇ ಅವರು ಹೇಳಿದರು. ಒಟ್ಟಾರೆ ವಿಧಾನಸಭಾ ಚುನಾವಣೆಗೆ ಕೊಪ್ಪಳದಿಂದ ಸ್ಪರ್ಧೆ ಬಯಸಿರುವ ಸಂಗಣ್ಣ ಕರಡಿ ಅವರು ಶಾಸಕ ಸ್ಥಾನದ ಮೇಲೆ ಕಣ್ಣಿಟ್ಟು ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಇವರ ಆಸೆಗೆ ಪಕ್ಷದ ಹೈಕಮಾಂಡ್ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂಓದಿ:ದೇವನಹಳ್ಳಿ ಕಾಂಗ್ರೆಸ್ ಬಂಡಾಯ ಶಮನಕ್ಕೆ ಮುನಿಯಪ್ಪ ಸಭೆ: ದೂರ ಉಳಿದ ಎ ಸಿ ಶ್ರೀನಿವಾಸ್ ನಡೆ ನಿಗೂಢ