ಕರ್ನಾಟಕ

karnataka

ಶಾಲಾದಿನಗಳ ಸಹಪಾಠಿಗಳ ಕಿರುಕುಳ: ಬೆಂಗಳೂರಲ್ಲಿ ಗೃಹಿಣಿ ಆತ್ಮಹತ್ಯೆ

By ETV Bharat Karnataka Team

Published : Aug 2, 2024, 4:48 PM IST

suicide
ಸಾಂದರ್ಭಿಕ ಚಿತ್ರ (ETV Bharat)

ಬೆಂಗಳೂರು: ಶಾಲಾ ದಿನಗಳ ಸಹಪಾಠಿಗಳ ಕಿರುಕುಳದಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗಲಗುಂಟೆ ಠಾಣೆ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಗುರುವಾರ ಸಂಜೆ ನಡೆದಿದೆ. ಮಮತಾ ಎಲ್.(31) ಆತ್ಮಹತ್ಯೆ ಮಾಡಿಕೊಂಡವರು.

ಮಮತಾಗೆ ಲೋಕೇಶ್ ಎಂಬವರೊಂದಿಗೆ ವಿವಾಹವಾಗಿತ್ತು. ಗಂಡು ಮಗುವಿನೊಂದಿಗೆ ದಂಪತಿ ಸಿಡೇದಹಳ್ಳಿಯಲ್ಲಿ ವಾಸವಿದ್ದರು. ಲೋಕೇಶ್ ಫುಡ್ ಡೆಲಿವರಿ ಏಜೆಂಟ್ ಆಗಿದ್ದರು. ಗುರುವಾರ ಮನೆಯಲ್ಲಿದ್ದ ಪತ್ನಿ ಫೋನ್ ಕರೆ ಸ್ವೀಕರಿಸುತ್ತಿಲ್ಲ, ಗಮನಿಸಿ ಎಂದು ಪಕ್ಕದ ಮನೆಯವರಿಗೆ ಲೋಕೇಶ್ ತಿಳಿಸಿದ್ದಾರೆ. ಬಳಿಕ ಪಕ್ಕದವರು ಬಂದು ಗಮನಿಸಿದಾಗ ಆತ್ಮಹತ್ಯೆ ಗೊತ್ತಾಗಿದೆ.

'ನನಗೇನಾದರೂ ಆದರೆ ಅದಕ್ಕೆ ಅಶೋಕ್ ಹಾಗೂ ಗಣೇಶ್ ಹೊಣೆ' ಎಂದು ಮಮತಾ ಡೆತ್​​ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದೆ. ಮಮತಾಗೆ ಹೈಸ್ಕೂಲ್ ದಿನಗಳ ಸಹಪಾಠಿಗಳಾಗಿದ್ದ ಅಶೋಕ್ ಹಾಗೂ ಗಣೇಶ್ ಎಂಬಿಬ್ಬರು ಮೊಬೈಲ್​ ಸಂದೇಶ ಕಳಿಸಿ ಕಿರುಕುಳ ನೀಡಿ, ಬೆದರಿಸುತ್ತಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಲೋಕೇಶ್ ದೂರಿನನ್ವಯ ಬಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಬ್ಬರೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ, ತನಿಖೆ ಮುಂದುವರೆದಿದೆ ಎಂದು‌ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details