ಕರ್ನಾಟಕ

karnataka

ಸಂಸತ್ ಅಧಿವೇಶನ: ರಾಜ್ಯಸಭೆಯಲ್ಲಿಂದು ಪ್ರಧಾನಿ ಮೋದಿ ಮಾತು - Rajya Sabha Session

By ETV Bharat Karnataka Team

Published : Jul 3, 2024, 11:59 AM IST

Updated : Jul 3, 2024, 2:31 PM IST

ರಾಜ್ಯಸಭೆ ಕಲಾಪ (IANS)
ನವದೆಹಲಿ: ರಾಜ್ಯಸಭೆ ಕಲಾಪ ನಡೆಯುತ್ತಿದೆ. ಮಂಗಳವಾರ ಪ್ರಸ್ತಾಪಗೊಂಡ ವಿಷಯಗಳು ಇಂದೂ ಸಹ ಮುಂದುವರೆಯುವ ಸಾಧ್ಯತೆ ಇದೆ. ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್‌ ಸದಸ್ಯ ಪ್ರಮೋದ್‌ ತಿವಾರಿ ಮಾತನಾಡುವಾಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯಸಭೆಯ ಸಭಾಪತಿ ಜಗದೀಪ್ ದಿನಕರ್ ಮಧ್ಯೆ ವಾಕ್ಸಮರ ನಡೆಯಿತು. ಅಧಿವೇಶನದ ಆರಂಭದಲ್ಲೇ ದೃಢೀಕರಿಸದ ಸಂಗತಿಗಳನ್ನು ಭಾಷಣದಲ್ಲಿ ಹೇಳಬೇಡಿ ಎಂದು ತಿವಾರಿಗೆ ಸಭಾಪತಿ ಧನಕರ್ ಹೇಳಿದಾಗ ವಾಗ್ವಾದ ಪ್ರಾರಂಭವಾಯಿತು. ಈ ವೇಳೆ ಮಧ್ಯಪ್ರವೇಶಿಸಿದ ಜೈರಾಮ್‌ ರಮೇಶ್‌, ತಿವಾರಿ ತಾವಾಡಿದ ಮಾತುಗಳನ್ನು ದೃಢೀಕರಿಸುತ್ತಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಧನಕರ್, ತುಂಬಾ ಬುದ್ಧಿವಂತ ಮತ್ತು ಪ್ರತಿಭಾವಂತರಾಗಿರುವ ನೀವು ಖರ್ಗೆ ಅವರ ಸ್ಥಾನವನ್ನು ತುಂಬಬೇಕು ಎಂದು ನಾನು ಭಾವಿಸುತ್ತೇನೆ. ತಕ್ಷಣವೇ ಖರ್ಗೆ ಅವರ ಸ್ಥಾನದಲ್ಲಿ ಕುಳಿತುಕೊಳ್ಳಬೇಕು. ಅವರು ಮಾಡಬೇಕಿರುವ ಕೆಲಸವನ್ನು ನೀವು ಮಾಡುತ್ತಿದ್ದೀರಿ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಖರ್ಗೆ, ನೀವು ವರ್ಣ (ಜಾತಿ) ವ್ಯವಸ್ಥೆಯನ್ನು ಇಲ್ಲಿ ತರಬೇಡಿ. ಜಾತಿ ವ್ಯವಸ್ಥೆ ಇನ್ನೂ ನಿಮ್ಮ ಮನಸ್ಸಿನಲ್ಲಿದೆ. ಅದಕ್ಕೆ ರಮೇಶ್ ತುಂಬಾ ಬುದ್ಧಿವಂತ ಎಂದು ಹೇಳುತ್ತಿದ್ದೀರಿ. ನಾನು ಚುರುಕಿಲ್ಲದ ಕಾರಣ ನನ್ನನ್ನು ಬದಲಾಯಿಸಬೇಕು ಎನ್ನುತ್ತಿದ್ದೀರಿ ಎಂದು ತಿರುಗೇಟು ನೀಡಿದ ಘಟನೆ ನಡೆಯಿತು. ಈ ಮಾತಿನ ಚಕಮಕಿ ಇಂದೂ ಸಹ ಮುಂದುವರೆಯುವ ಸಾಧ್ಯತೆ ಇದೆ. ಜೊತೆಗೆ, ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ನೀಡುವ ಸಾಧ್ಯತೆ ಕೂಡ ಇದೆ.
Last Updated : Jul 3, 2024, 2:31 PM IST

ABOUT THE AUTHOR

...view details