ಉಡುಪಿ: ಬಾವಿಗೆ ಬಿದ್ದ ಮರಿ ಚಿರತೆ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ - ವಿಡಿಯೋ - LEOPARD CUB RESCUED BY FOREST STAFF
Published : Nov 25, 2024, 7:24 PM IST
ಉಡುಪಿ: ಕಾರ್ಕಳ ಸಮೀಪದ ನಿಟ್ಟೆ ಗ್ರಾಮದ ಅರಂತಬೆಟ್ಟು ದರ್ಕಾಸ್ ಬಳಿಯ ಮನೆಯೊಂದರ ಬಳಿಗೆ ಆಹಾರ ಅರಸಿಕೊಂಡು ಬಂದಿದ್ದ ಚಿರತೆ ಮರಿ ಅಲ್ಲಿನ ಬಾವಿಯೊಳಗೆ ಬಿದ್ದಿದೆ. ಇದೀಗ ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ರಕ್ಷಣೆ ಮಾಡಿದ್ದಾರೆ.
ರಾತ್ರಿ ಮನೆಯ ಬಳಿ ಕೋಳಿ ಇರುವುದನ್ನು ಗಮನಿಸಿದ್ದ ಚಿರತೆ ಅದನ್ನು ಹಿಡಿದು ತಿನ್ನಲು ಮುಂದಾಗಿ ಓಡುವ ಭರದಲ್ಲಿ ತೆರೆದ ಬಾವಿಗೆ ಬಿದ್ದಿದೆ. ಮುಂಜಾನೆ ಇದನ್ನ ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ನಂತರ ಸ್ಥಳಕ್ಕೆ ಬಂದ ಸಿಬ್ಬಂದಿ ಬೋನು ಮತ್ತು ಬಲೆಯನ್ನು ಇರಿಸಿ ಚಿರತೆಯನ್ನು ಬಾವಿಯಿಂದ ಸುರಕ್ಷಿತವಾಗಿ ಮೇಲಕ್ಕೆತ್ತಿದ್ದರು. ಒಂದು ವರ್ಷದ ಮರಿ ಚಿರತೆ ಇದಾಗಿದೆ. ಸ್ಥಳಕ್ಕೆ ಬಂದ ತಾಲೂಕು ಪಶುವೈದ್ಯಾಧಿಕಾರಿ ವಾಸುದೇವ್ ಅವರು ಚಿರತೆಯ ಆರೋಗ್ಯ ತಪಾಸಣೆ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಎಸಿಎಫ್ ಪಿ. ಶ್ರೀಧರ್, ಆರ್ಎಫ್ಒ ಪ್ರಭಾಕರ್ ಕುಲಾಲ್, ಡಿಆರ್ಎಫ್ಒ ಹುಕ್ರಪ್ಪ ಗೌಡ, ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರು ಭಾಗವಹಿಸಿದ್ದರು.
ಇದನ್ನೂ ಓದಿ : ಸ್ವಾಧೀನ ಕಳೆದುಕೊಂಡ ಚಿರತೆ.. ಬರಿಗೈಯಲ್ಲೇ ಹೊತ್ತೊಯ್ದ ಅರಣ್ಯ ಇಲಾಖೆ ಸಿಬ್ಬಂದಿ