ಕರ್ನಾಟಕ

karnataka

ಬೆಂಗಳೂರು: ಯುವತಿಗಾಗಿ ಸ್ನೇಹಿತರ ನಡುವೆ ಶುರುವಾದ ಗಲಾಟೆ ಹತ್ಯೆಯಲ್ಲಿ ಅಂತ್ಯ! - Young Man Murder

By ETV Bharat Karnataka Team

Published : 6 hours ago

ಯುವಕರಿಬ್ಬರ ನಡುವಿನ ಜಗಳದಲ್ಲಿ ಓರ್ವ ಕೊಲೆಗೀಡಾದ ಘಟನೆ ಶನಿವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

bengaluru murder
ವರುಣ್, ಆರೋಪಿ ದಿವೇಶ್ (ETV Bharat)

ಬೆಂಗಳೂರು:ರೂಮ್‌ಮೇಟ್‌ಗಳ ನಡುವೆ ಆರಂಭವಾದ ಗಲಾಟೆ ಹತ್ಯೆಯಲ್ಲಿ ಅಂತ್ಯವಾದ ಘಟನೆ ಶನಿವಾರ ಬೆಳಗ್ಗೆ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೆದ್ದಲಹಳ್ಳಿಯಲ್ಲಿ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿಹಾಕಿ ವರುಣ್ ಕೋಟ್ಯಾನ್ (24) ಎಂಬಾತನನ್ನು ಹತ್ಯೆ ಮಾಡಲಾಗಿದೆ. ಆರೋಪಿ ದಿವೇಶ್ ಎಂಬಾತನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಾಗಲೂರಿನಲ್ಲಿ ಸೇಫ್ಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ವರುಣ್ ಹಾಗೂ ಆರೋಪಿ ದಿವೇಶ್ ಕಳೆದ ಒಂದು ವರ್ಷದಿಂದ ಗೆದ್ದಲಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಯುವತಿಯೊಬ್ಬಳ ವಿಚಾರವಾಗಿ ವರುಣ್ ಹತ್ಯೆಯಾಗಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ದಿವೇಶ್‌ನನ್ನು ಪ್ರೀತಿಸುತ್ತಿದ್ದ ಯುವತಿಯೊಬ್ಬಳು, ಇತ್ತೀಚೆಗೆ ಆತನಿಂದ ದೂರವಾಗಿ ವರುಣ್‌ನನ್ನು ಪ್ರೀತಿಸಲು ಶುರು ಮಾಡಿದ್ದಳು. ಇದೇ ವಿಚಾರವಾಗ ಶುಕ್ರವಾರ ರಾತ್ರಿ ಸ್ನೇಹಿತರಿಬ್ಬರ ನಡುವೆ ಜಗಳವಾಗಿದೆ. ಶನಿವಾರ ಬೆಳಗ್ಗೆಯೂ ಸಹ ಜಗಳವಾಡಿಕೊಂಡೇ ಸ್ನೇಹಿತರಿಬ್ಬರು ಮನೆಯಿಂದ ಹೊರ ಬಂದಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಆರೋಪಿ ದಿವೇಶ್, ವರುಣ್‌ನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಅಲ್ಲಿಯೇ ಇದ್ದ ಆರೋಪಿ ದಿವೇಶ್‌ನನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಹುಡುಗಿ ವಿಚಾರವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದ್ದು, ವಿಚಾರಣೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಸಿಗ್ನಲ್​ನಲ್ಲಿ ಎಕ್ಸ್​ಲರೇಟರ್ ಹೆಚ್ಚಿಸಿ ಕಿರಿಕಿರಿ: ಪ್ರಶ್ನಿಸಿದ ಐಪಿಎಸ್ ಅಧಿಕಾರಿ ಮಗನ ಮೇಲೆ ಹಲ್ಲೆ - Assault Case

ABOUT THE AUTHOR

...view details