ಕರ್ನಾಟಕ

karnataka

By ETV Bharat Karnataka Team

Published : Jan 31, 2024, 10:43 PM IST

ETV Bharat / state

ರಾಜ್ಯಕ್ಕೆ ಬರಲಿದೆ 1500 ಕೋಟಿ ಹೂಡಿಕೆಯ ಪ್ರಪ್ರಥಮ ಲ್ಯಾಪ್ - ಟಾಪ್ ತಯಾರಿಕಾ ಘಟಕ: ಎಂ.ಬಿ.ಪಾಟೀಲ್

ಸಚಿವ ಎಂ.ಬಿ. ಪಾಟೀಲ್ ಸಮ್ಮುಖದಲ್ಲಿ ರಾಜ್ಯದ ಪರ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ವಿಸ್ಟ್ರಾನ್ ಕಂಪನಿಯ ಅಧ್ಯಕ್ಷ ಅಲೆಕ್ ಲಾಯ್ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.

agreement
ವಿಸ್ಟ್ರಾನ್ ಕಂಪನಿ ಹಾಗೂ ರಾಜ್ಯ ಸರ್ಕಾರ ನಡುವೆ ಒಡಂಬಡಿಕೆ ನಡೆಯಿತು.

ಬೆಂಗಳೂರು: ತೈವಾನ್ ಮೂಲದ ಜಗದ್ವಿಖ್ಯಾತ ವಿಸ್ಟ್ರಾನ್ ಕಂಪನಿಯು ರಾಜ್ಯದಲ್ಲಿ 1,500 ಕೋಟಿ ರೂ ಹೂಡಿಕೆಯೊಂದಿಗೆ ತನ್ನ ಲ್ಯಾಪ್-ಟಾಪ್ ಉತ್ಪಾದನಾ ಘಟಕವನ್ನು ಆರಂಭಿಸಲಿದೆ. ಈ ಸಂಬಂಧ ಅದು ರಾಜ್ಯ ಸರ್ಕಾರದೊಂದಿಗೆ ಇಂದು ಇಲ್ಲಿ ಅಧಿಕೃತವಾಗಿ ಒಡಂಬಡಿಕೆಗೆ ಅಂಕಿತ ಹಾಕಿದೆ. ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಸಮ್ಮುಖದಲ್ಲಿ ರಾಜ್ಯದ ಪರ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ವಿಸ್ಟ್ರಾನ್ ಕಂಪನಿಯ ಅಧ್ಯಕ್ಷ ಅಲೆಕ್ ಲಾಯ್ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.

ಬೆಂಗಳೂರಿನ ಖನಿಜ ಭವನದಲ್ಲಿ ಇಂದು ನಡೆದ ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ವಿಸ್ಟ್ರಾನ್ ಕಂಪನಿಯು ಈಗಾಗಲೇ ಕೋಲಾರದಲ್ಲಿ ತನ್ನ ಘಟಕವನ್ನು ಹೊಂದಿದೆ. ಆದರೆ, ಈ ಹೊಸ ಹೂಡಿಕೆ ಮೂಲಕ ರಾಜ್ಯದಲ್ಲಿ ಪ್ರಪ್ರಥಮ ಲ್ಯಾಪ್-ಟಾಪ್ ತಯಾರಿಕಾ ಘಟಕವೂ ಬರುತ್ತಿದೆ. 2026ರ ಜನವರಿ ವೇಳೆಗೆ ಇದರಲ್ಲಿ ಉತ್ಪಾದನಾ ಚಟುವಟಿಕೆ ಆರಂಭಿಸಲಿದೆ. ಈ ಯೋಜನೆಯಿಂದ 3,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.

ವಿಸ್ಟ್ರಾನ್ ಕಂಪನಿಯ ಈ ಯೋಜನೆಗಾಗಿ 32 ಎಕರೆ ಜಮೀನನ್ನು ಬೆಂಗಳೂರಿನ ಸಮೀಪ ಕೇಳಿದ್ದು, ಒಂದು ವಾರದಲ್ಲಿ ಇದು ಅಂತಿಮವಾಗಲಿದೆ. ಇಲ್ಲಿ ತಯಾರಾಗುವ ಲ್ಯಾಪ್-ಟಾಪ್​ಗಳ ಪೈಕಿ ಶೇಕಡ 50ರಷ್ಟು ಹೊರದೇಶಗಳಿಗೆ ರಫ್ತಾಗಲಿದೆ. ಇದರಿಂದ ರಾಜ್ಯದ ರಫ್ತು ವಹಿವಾಟಿಗೂ ಮೌಲಿಕ ಕೊಡುಗೆ ಸಿಗಲಿದೆ. ಉದ್ದೇಶಿತ ಘಟಕವು ಸಂಪೂರ್ಣ ಆಟೋಮೇಶನ್ ಸೌಲಭ್ಯ ಹೊಂದಿರಲಿದೆ ಎಂದು ಮಾಹಿತಿ ನೀಡಿದರು.

ವಿಸ್ಟ್ರಾನ್ ಲ್ಯಾಪ್ಟಾಪ್ ತಯಾರಿಕೆ ಘಟಕವು ಸರ್ವರ್​ಗಳು, ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್), ವಿದ್ಯುತ್ ಚಾಲಿತ ವಾಹನಗಳ ವಲಯಕ್ಕೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಸಲಿದೆ. ಈ ವರ್ಷದ ಜುಲೈನಲ್ಲಿ ಘಟಕದ ಕಾಮಗಾರಿ ಆರಂಭವಾಗಲಿದ್ದು, ಈ ಘಟಕವು ರಾಜ್ಯ ಸರಕಾರದ 4.0 ಕೈಗಾರಿಕಾ ಕ್ರಾಂತಿಯ ಆಶಯಗಳಿಗೆ ಪೂರಕವಾಗಿರಲಿದೆ ಎಂದು ಸ್ಪಷ್ಟ ಪಡಿಸಿದರು.

ಸರ್ಕಾರವು ಕೈಗಾರಿಕೆ ಮತ್ತು ಹೂಡಿಕೆಗಳ ಪರವಾಗಿದ್ದು, ಉದ್ಯಮ ಸ್ನೇಹಿ ನೀತಿಗಳನ್ನು ಹೊಂದಿದೆ. ಜೊತೆಗೆ ಕಾಲಕಾಲಕ್ಕೆ ಹಲವು ಉಪಯುಕ್ತ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಜತೆಗೆ ರಾಜ್ಯದ ಉಳಿದ ಭಾಗಗಳಲ್ಲೂ ಆಧುನಿಕ ಉದ್ಯಮಗಳು ನೆಲೆಯೂರುವಂತೆ ಮಾಡಲು ಆದ್ಯತೆ ನೀಡಲಾಗಿದೆ ಎಂದರು.

ಈ ವೇಳೆ ವಿಸ್ಟ್ರಾನ್ ಕಂಪನಿ ಹಿರಿಯ ನಿರ್ದೇಶಕ ಡೆನಿಸ್ ಹಂಗ್, ಜನರಲ್ ಮ್ಯಾನೇಜರ್ ರಾಚೆಲ್ ಲೂ, ಉನ್ನತಾಧಿಕಾರಿ ಸಿ.ಸುಧೀರ್, ಪ್ರಿಯವ್ರತ ಪಾಂಡಾ, ಉದ್ಯಮಿ ಸಿ.ಎ.ಸುರೇಶ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

ಇದನ್ನೂಓದಿ:'ಪ್ರಗತಿ ಮೊಬೈಲ್ ಅಪ್ಲಿಕೇಶನ್'ಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details