ಕರ್ನಾಟಕ

karnataka

ETV Bharat / state

ನಿಖಿಲ್​ ಗೆಲುವಿಗೆ ಒಟ್ಟಿಗೆ ಶ್ರಮಿಸಿ, ದೊಡ್ಡ ಅಂತರದ ಜಯ ಪಡೆಯುತ್ತೇವೆ: ಬಿಎಸ್​ವೈ ವಿಶ್ವಾಸ

ಚನ್ನಪಟ್ಟಣದ ಜನರು ನನಗೆ ಅವಕಾಶ ನೀಡುವ ವಿಶ್ವಾಸವಿದೆ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ನಡೆದ ಸಭೆಯ ನಿರ್ಧಾರಕ್ಕೆ ಒಪ್ಪಿದ್ದೇನೆ ಎಂದು ಚನ್ನಪಟ್ಟಣ ಉಪಚುನಾವಣೆಯ ಎನ್​ಡಿಎ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ತಿಳಿಸಿದರು.

nikhil kumaraswamy
ನಿಖಿಲ್ ಕುಮಾರಸ್ವಾಮಿ ಇತರರು (ETV Bharat)

By ETV Bharat Karnataka Team

Published : 5 hours ago

ಬೆಂಗಳೂರು: ''ನಿಖಿಲ್ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ಅಭ್ಯರ್ಥಿಯನ್ನಾಗಿ ಘೋಷಿಸಿದ್ದೇವೆ. ಪ್ರಧಾನಿ ಮೋದಿ ಆಶೀರ್ವಾದ ಇದೆ, ಮೋದಿ ಪಕ್ಷದಿಂದ ಬೆಂಬಲವಿದೆ. ಎಲ್ಲ ಮುಖಂಡರು ಒಟ್ಟಾಗಿ ಸೇರಿದ್ದೇವೆ. ಚುನಾವಣೆಯಲ್ಲಿ ಗೆದ್ದು ನಂತರ ನಿಮ್ಮನ್ನು ಭೇಟಿಯಾಗಲಿದ್ದೇವೆ'' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.

ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ನಿವಾಸ ಧವಳಗಿರಿಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಸಮನ್ವಯ ಸಭೆ ನಡೆಯಿತು. ಈ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಕುರಿತು ಸಮಾಲೋಚನೆ ನಡೆಸಲಾಯಿತು. ಅಂತಿಮವಾಗಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು ಎನ್ನುವ ನಿರ್ಣಯವನ್ನು ಸರ್ವಾನುಮತದಿಂದ ಕೈಗೊಳ್ಳಲಾಯಿತು.

ಬಿ.ಎಸ್.ಯಡಿಯೂರಪ್ಪ (ETV Bharat)

ಸಭೆ ನಂತರ ಮಾತನಾಡಿದ ಯಡಿಯೂರಪ್ಪ, ''ನಿಖಿಲ್ ಗೆಲುವು ಖಚಿತ, ಈ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಬಿಜೆಪಿ ಜೆಡಿಎಸ್​​ನ ಎಲ್ಲ ಪ್ರಮುಖರು ಒಟ್ಟಾಗಿ ಪ್ರವಾಸ ಮಾಡುತ್ತೇವೆ. ಪಕ್ಷಾಂತರ ಮಾಡಿರುವವರ ಬಗ್ಗೆ, ಬೇರೆಯವರ ಬಗ್ಗೆ ಮಾತನಾಡಲ್ಲ. ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ, ನಾವೆಲ್ಲಾ ನಿಖಿಲ್​ಗೆ ಬೆಂಬಲಿಸುತ್ತೇವೆ. ದೊಡ್ಡ ಅಂತರ ಗೆಲುವು ಪಡೆಯುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ''ಯಡಿಯೂರಪ್ಪ ಆಶೀರ್ವಾದದೊಂದಿಗೆ ಅಶೋಕ್, ನಾನು ಸೇರಿ ನಮ್ಮೆಲ್ಲಾ ನಾಯಕರು ಸೇರಿ ನಿರ್ಧಾರ ಮಾಡಿದ್ದೇವೆ. ಇಂದು ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರ ಒತ್ತಡ ಹಾಗೂ ಎರಡು, ಮೂರು ದಿನಗಳ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಎರಡೂ ಪಕ್ಷಗಳ ಮುಖಂಡರು ಸೇರಿ ಯಡಿಯೂರಪ್ಪ ಸಮ್ಮುಖದಲ್ಲಿ ನಿಖಿಲ್ ಹೆಸರು ಘೋಷಿಸಿದ್ದೇವೆ'' ಎಂದರು.

ನಮ್ಮಲ್ಲಿ ಗೊಂದಲ ಇರಲಿಲ್ಲ: ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಷಯ ಕುರಿತು ಮಾತನಾಡಿದ ಅವರು, ''ಕಳೆದ ಒಂದೂವರೆ ತಿಂಗಳಿನಿಂದ ನಡೆದ ಬೆಳವಣಿಗೆ, ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಇದು ಅಪ್ರಸ್ತುತ, ಈ ಸಂದರ್ಭದಲ್ಲಿ ನಾವು, ಬಿಜೆಪಿಯ ಎಲ್ಲ ನಾಯಕರೂ ನಿರ್ಧರಿಸಿದ್ದೇವೆ. ನಮ್ಮ ರಾಜ್ಯ ಘಟಕದ ಎಲ್ಲ ನಾಯಕರು, ಹಲವರು ನನ್ನ ಜೊತೆ ಚರ್ಚಿಸಿದ್ದಾರೆ. ಪ್ರಲ್ಹಾದ್ ಜೋಶಿ ನಿವಾಸದಲ್ಲಿಯೂ ಹಲವಾರು ಬಾರಿ ಸಭೆ ನಡೆಸಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇರಲಿಲ್ಲ. ಮುಕ್ತವಾದ ಅವಕಾಶವಿತ್ತು, ಅವರು ಬೇರೆ ಬೇರೆ ತೀರ್ಮಾನ ಮಾಡಿಕೊಂಡಿರುವುದರಿಂದ ಆ ಬಗ್ಗೆ ಚರ್ಚೆ ಬೇಡ. ನಮ್ಮ ಅಭ್ಯರ್ಥಿ ಗೆಲ್ಲುವ ಕಡೆಯಷ್ಟೇ ನಮ್ಮ ನಿರ್ಧಾರ'' ಎಂದು ಹೆಚ್​ಡಿಕೆ ತಿಳಿಸಿದರು.

ಬಿಜೆಪಿ-ಜೆಡಿಎಸ್ ನಾಯಕರ ಸಮನ್ವಯ ಸಭೆ (ETV Bharat)

ಮೈತ್ರಿಗೆ ಧಕ್ಕೆಯಾಗಬಾರದು ಎಂದಿದ್ದೆ:''ಪ್ರಲ್ಹಾದ್ ಜೋಶಿ ಜೊತೆ ಎರಡು ದಿನಗಳ ಕೆಳಗೆ ನಡೆದ ಸಭೆಯಲ್ಲಿಯೂ ಅಭ್ಯರ್ಥಿ ಆಯ್ಕೆ ಕುರಿತು ನನ್ನ ತಕರಾರು ಇರಲಿಲ್ಲ. ಬಿ ಫಾರಂ ಬಿಜೆಪಿಯಿಂದ ಕೊಟ್ಟರೂ ತೊಂದರೆ ಇಲ್ಲ ಎಂದಿದ್ದೆ, ಮೈತ್ರಿಗೆ ಧಕ್ಕೆಯಾಗಬಾರದು ಎಂದಿದ್ದೆ. ಆದರೆ, ಜೆ.ಪಿ.ನಡ್ಡಾ ಒಂದು ಪ್ರಸ್ತಾವನೆ ಇಟ್ಟರು, ಜೆಡಿಎಸ್ ಅಭ್ಯರ್ಥಿ ಹಾಕಲು ಸೂಚನೆ ಕೊಡುತ್ತಿರುವುದಾಗಿ ತಿಳಿಸಿದರು. ಆದರೂ ಯೋಗೇಶ್ವರ್ ಬಿಜೆಪಿಯ ರಾಷ್ಟ್ರಾಧ್ಯಕ್ಷರ ನಿರ್ಧಾರ ಧಿಕ್ಕರಿಸಿದ್ದಾರೆ. ನಾನು ಎರಡೂ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡುತ್ತಿದ್ದೇನೆ, ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡಿದ್ದೆವೋ, ಅದೇ ರೀತಿ ಮೂರು ಕ್ಷೇತ್ರಗಳಲ್ಲಿ ಒಮ್ಮತದಿಂದ ಹೋಗೋಣ'' ಎಂದು ಕರೆ ನೀಡಿದರು.

ನನ್ನ ಇಷ್ಟ, ಕಷ್ಟದ ಪ್ರಶ್ನೆಯಲ್ಲ: ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ''ಸಾಕಷ್ಟು ಸರಣಿ ಸಭೆಗಳ ನಂತರ ಎರಡೂ ಪಕ್ಷಗಳ ಹಿರಿಯರು ಚರ್ಚಿಸಿ ಅಂತಿಮವಾಗಿ ಇಂದು ರೈತ ನಾಯಕ, ಮಾಜಿ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ನಡೆದ ಚರ್ಚೆಯಲ್ಲಿ ಅವರೇ ಎನ್​ಡಿಎ ಅಭ್ಯರ್ಥಿಯಾಗಿ ನನ್ನ ಹೆಸರು ಘೋಷಿಸಿದ್ದಾರೆ. ಎರಡೂ ಪಕ್ಷದವರು ಈ ಅವಕಾಶ ನೀಡಿದ್ದಾರೆ. 20 ದಿನವಷ್ಟೇ ಬಾಕಿ ಇದೆ, ನಾಳೆ ನಾಮಪತ್ರ ಸಲ್ಲಿಸಲು ಕಡೆಯ ದಿನ. ಇಂದಿನಿಂದಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ'' ಎಂದರು.

''ಅಭ್ಯರ್ಥಿ ಆಯ್ಕೆ ಮಾಡಲಾಗಿದೆ, ನನಗೆ ಒತ್ತಡವಿತ್ತೋ ಇಲ್ಲವೋ ಎನ್ನುವ ಪ್ರಶ್ನೆ ಬರಲ್ಲ. ಇಲ್ಲಿ ನನ್ನ ಇಷ್ಟ, ಕಷ್ಟದ ಪ್ರಶ್ನೆಯಲ್ಲ. ಕಳೆದ ಎರಡು ಮೂರು ತಿಂಗಳಿನಿಂದ ಪಕ್ಷ ಸಂಘಟನೆ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಕಾರ್ಯಕರ್ತರನ್ನು ನಿಲ್ಲಿಸಿ ಅವರನ್ನು ಶಾಸಕರನ್ನಾಗಿ ಮಾಡಬೇಕು, ಅವರಿಗೆ ಅಧಿಕಾರ ಸಿಕ್ಕರೆ ನನಗೇ ಸಿಕ್ಕ ಖುಷಿ ಎಂದಿದ್ದೆ. ಆದರೆ, ಇತ್ತೀಚಿನ ಬೆಳವಣಿಗೆ, ಇಂದು ಪಕ್ಷದ ಕಚೇರಿಯಲ್ಲಿನ ಸಭೆಯ ನಿರ್ಧಾರಕ್ಕೆ ಒಪ್ಪಿದ್ದೇನೆ'' ಎಂದು ಪ್ರತಿಕ್ರಿಯಿಸಿದರು.

''ಎಲ್ಲರೂ ಸಂಚು ರೂಪಿಸಿ ಈ ಚುನಾವಣೆ ಮಾಡುತ್ತಿದ್ದಾರೆ. ಚಕ್ರವ್ಯೂಹ ರಚನೆಯಾಗಿದೆ. ಈ ಚಕ್ರವ್ಯೂಹವನ್ನು ಬೇಧಿಸುವ ಶಕ್ತಿಯನ್ನು ಎರಡೂ ಪಕ್ಷದ ಕಾರ್ಯಕರ್ತರು, ಮುಖಂಡರು ನೀಡಲಿದ್ದಾರೆ. ಚನ್ನಪಟ್ಟಣ ಜನತೆ ನನಗೆ ಅವಕಾಶ ನೀಡುವ ವಿಶ್ವಾಸವಿದೆ'' ಎಂದರು.

ಇದನ್ನೂ ಓದಿ:ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಎನ್​ಡಿಎ ಅಭ್ಯರ್ಥಿ: ಹೆಚ್.​ಡಿ. ದೇವೇಗೌಡ, ಬಿಎಸ್​ವೈ ಅಧಿಕೃತ ಘೋಷಣೆ

ABOUT THE AUTHOR

...view details