ಕರ್ನಾಟಕ

karnataka

ETV Bharat / state

ತವರು ಕ್ಷೇತ್ರದಲ್ಲೇ ಮುಗ್ಗರಿಸಿದ ಕಾಂಗ್ರೆಸ್ ಅಭ್ಯರ್ಥಿ: ಸಚಿವ, ಶಾಸಕರ ಕ್ಷೇತ್ರದಲ್ಲೂ ಕಾಗೇರಿ ಜಯಭೇರಿ - Vishweshwar Hegde Kageri - VISHWESHWAR HEGDE KAGERI

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ 7,82,495 ಮತಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್‌ನ ಡಾ.ಅಂಜಲಿ ನಿಂಬಾಳ್ಕರ್ 4,45,067 ಮತ ಪಡೆದುಕೊಂಡಿದ್ದಾರೆ.

vishweshwar-hegde-kageri
ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ. ಅಂಜಲಿ ನಿಂಬಾಳ್ಕರ್ (ETV Bharat)

By ETV Bharat Karnataka Team

Published : Jun 6, 2024, 8:18 PM IST

ಕಾರವಾರ(ಉತ್ತರ ಕನ್ನಡ): ಕಳೆದೊಂದು ತಿಂಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದ್ದಾರೆ. ಆದರೆ ಪ್ರತೀ ಬಾರಿ ಕಾಂಗ್ರೆಸ್‌ನ ಹಿನ್ನಡೆಗೆ ಕಾರಣವಾಗುತ್ತಿದ್ದ ಕಿತ್ತೂರು, ಖಾನಾಪುರ ಭಾಗದ ಮತಗಳನ್ನು ಸೆಳೆದು ಗೆಲುವಿಗೆ ಹಂಬಲಿಸಿದ್ದ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದ್ದು, ಡಾ.ಅಂಜಲಿ ನಿಂಬಾಳ್ಕರ್ ತವರು ಕ್ಷೇತ್ರ ಸೇರಿದಂತೆ 8 ಕ್ಷೇತ್ರಗಳಲ್ಲಿಯೂ ಹಿನ್ನಡೆ ಪಡೆದು ತೀವ್ರ ಮುಖಭಂಗ ಅನುಭವಿಸಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ 7,82,495 ಮತಗಳನ್ನು ಪಡೆದುಕೊಂಡಿದ್ದು, ಕಾಂಗ್ರೆಸ್‌ನ ಡಾ.ಅಂಜಲಿ ನಿಂಬಾಳ್ಕರ್ ಕೇವಲ 4,45,067 ಮತಗಳನ್ನು ಪಡೆದುಕೊಂಡಿದ್ದಾರೆ. ಎರಡೂವರೆ ಲಕ್ಷ ಅಂತರದ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಗೇರಿ 3,37,428 ಭಾರೀ ಮತಗಳ ಅಂತರದಿಂದ ಗೆದ್ದಿರುವುದು ಅವರ ಖುಷಿ ಹೆಚ್ಚಿಸುವಂತೆ ಮಾಡಿದೆ. ಆದರೆ ಕಡಿಮೆ ಮತಗಳ ಅಂತರದಲ್ಲಾದರೂ ಗೆದ್ದೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಪಾಲಿಗೆ ಭಾರಿ ಮತಗಳ ಅಂತರದ ಸೋಲು ಇದೀಗ ಪರಾಮರ್ಶೆ ಮಾಡಿಕೊಳ್ಳುವಂತೆ ಮಾಡಿದೆ.

ಕಳೆದ ಮೂರು ದಶಕಗಳ ಹಿಂದೆ ಕೈ ಜಾರಿದ್ದ ಉತ್ತರಕನ್ನಡ ಲೋಕಸಭಾ ಕ್ಷೇತ್ರಗಳ ಗೆಲುವಿಗೆ ಎಷ್ಟೇ ಪ್ರಯತ್ನಪಟ್ಟರೂ ಬಣ ರಾಜಕೀಯ ಸೇರಿದಂತೆ ಇತರ ಕಾರಣಗಳಿಂದ ಪ್ರತಿಬಾರಿ ಕೈತಪ್ಪುವಂತೆ ಮಾಡಿತ್ತು. ಆದರೆ ಈ ಬಾರಿ ಜಿಲ್ಲೆಯವರನ್ನು ಕೈ ಬಿಟ್ಟ ಕಾಂಗ್ರೆಸ್ ಉತ್ತರಕನ್ನಡ ಲೋಕಸಭಾ ಕ್ಷೇತ್ರಕ್ಕೊಳಪಟ್ಟಿರುವ ಬೆಳಗಾವಿಯ ಖಾನಾಪುರದ ಡಾ.ಅಂಜಲಿ ನಿಂಬಾಳ್ಕರ್​​ಗೆ ಟಿಕೆಟ್ ನೀಡಿತ್ತು.

ಈ ಮೂಲಕ ಪ್ರತಿಬಾರಿ ಕಿತ್ತೂರು ಖಾನಾಪುರ ಭಾಗದಲ್ಲಿನ ಹಿನ್ನಡೆಯನ್ನು ತಪ್ಪಿಸಿ ಮಾಡಿದ ಪ್ಲ್ಯಾನ್ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ 59,830 ಮತಗಳು ಹಾಗೂ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿಯೇ 36,242 ಮತಗಳ ಭಾರಿ ಹಿನ್ನಡೆ ಅನುಭವಿಸಿದ್ದಾರೆ.

ಇದಲ್ಲದೆ ಜಿಲ್ಲಾ ಉಸ್ತುವಾರಿ ಮಂತ್ರಿ ಮಂಕಾಳ ವೈದ್ಯ ಅವರ ಕ್ಷೇತ್ರವಾಗಿರುವ ಭಟ್ಕಳದಲ್ಲಿಯೂ ಕಾಂಗ್ರೆಸ್ 32,403 ಮತಗಳ ಹಿನ್ನಡೆ ಅನುಭವಿಸಿದೆ. ಅಲ್ಪಸಂಖ್ಯಾತರ ಮತಗಳು ಹಾಗೂ ಸಚಿವರ ಸ್ವ ಕ್ಷೇತ್ರವಾಗಿದ್ದರಿಂದ ಮುನ್ನಡೆ ಕಾಯ್ದುಕೊಳ್ಳುವ ನಿರೀಕ್ಷೆ ಹೊಂದಿದ್ದ ಕಾಂಗ್ರೆಸ್‌ಗೆ ಇಲ್ಲಿಯೂ ನಿರಾಸೆಯಾಗಿದೆ.

ಇದಲ್ಲದೆ ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ ಶಾಸಕರಾಗಿರುವ ಹಳಿಯಾಳ ಕ್ಷೇತ್ರದಲ್ಲಿ 28,880 ಮತಗಳು, ಕಾರವಾರದಲ್ಲಿ 65,428 ಮತಗಳು, ಶಿರಸಿ 39,928 ಮತಗಳು, ಕುಮಟಾದಲ್ಲಿ 53,493 ಮತಗಳು ಹಾಗೂ ಯಲ್ಲಾಪುರದಲ್ಲಿ 18,357 ಭಾರಿ ಮತಗಳ ಹಿನ್ನಡೆ ಅನುಭವಿಸುವಂತಾಗಿದೆ. ಈ ಮೂಲಕ ಸ್ವಪಕ್ಷದ ಶಾಸಕರು ಹಾಗೂ ಸಚಿವರ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಹಿನ್ನಡೆ ಅನುಭವಿಸಿ ಭಾರಿ ಮುಖಭಂಗ ಅನುಭವಿಸುವಂತಾಗಿದೆ.

ಇನ್ನು ಬಹುಸಂಖ್ಯಾತ ಮರಾಠ ಸಮುದಾಯದವರೇ ಹೆಚ್ಚಾಗಿರುವ ಕ್ಷೇತ್ರದಲ್ಲಿ ಮರಾಠ ಸಮುದಾಯದ ಅಂಜಲಿ ನಿಂಬಾಳ್ಕರ್​ಗೆ ಹೆಚ್ಚಿನ ಮತಗಳು ಬೀಳಬಹುದು ಎಂದು ಕಾಂಗ್ರೆಸ್ ಲೆಕ್ಕಾಚಾರ ನಡೆಸಿತ್ತು. ಇದಲ್ಲದೆ ಗ್ಯಾರಂಟಿ ಯೋಜನೆಗಳು, ಶಾಸಕರು, ಸಚಿವರ ಬೆಂಬಲ ಕೂಡ ಲಾಭ ತಂದುಕೊಡುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಮತ ಏಣಿಕೆ ಆರಂಭದಿಂದ ಕೊನೆಯವರೆಗೂ ಒಮ್ಮೆಯೂ ಲೀಡ್ ಪಡೆದುಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್‌ಗೆ ತನ್ನ ಲೆಕ್ಕಾಚಾರಗಳೆಲ್ಲವೂ ಹುಸಿಯಾಗಿ ಸೋಲು ಅನುಭವಿಸುವಂತಾಯಿತು.

ವಿಧಾನಸಭಾ ಕ್ಷೇತ್ರವಾರು ಮತಗಳ ಮಾಹಿತಿ

ಕ್ಷೇತ್ರ ಕಾಂಗ್ರೆಸ್ ಬಿಜೆಪಿ ಅಂತರ
ಖಾನಾಪುರ 48148 107978 59830
ಕಿತ್ತೂರು 56203 92445 36242
ಹಳಿಯಾಳ 54546 83426 28880
ಕಾರವಾರ 47889 113317 65428
ಕುಮಟಾ 44435 97928 53493
ಭಟ್ಕಳ 67885 100288 32403
ಶಿರಸಿ 60124 100052 39928
ಯಲ್ಲಾಪುರ 64066 82453 18357

ಇದನ್ನೂ ಓದಿ:ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಕಾಗೇರಿ ಜಯಭೇರಿ - General Election Results

ABOUT THE AUTHOR

...view details