ಕರ್ನಾಟಕ

karnataka

ETV Bharat / state

ಅಮೃತ್ ಕಾಲದಲ್ಲಿ ಭಾರತದ ಉದಯ ನೋಡುತ್ತಿದ್ದೇವೆ:ಉಪರಾಷ್ಟ್ರಪತಿ ಜಗದೀಪ್ ಧನಕರ್ - NAL Centre - NAL CENTRE

ಬೆಂಗಳೂರು ನಗರದ ಎನ್ ಎ ಎಲ್ ಕೇಂದ್ರದಲ್ಲಿ ಸ್ವದೇಶಿ ನಿರ್ಮಿತ ವಿಮಾನಗಳ ಪ್ರದರ್ಶನವನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ವೀಕ್ಷಿಸಿದರು. ನಂತರ ಎನ್ಎಎಲ್ ತಂತ್ರಜ್ಞಾನಗಳ ಪ್ರದರ್ಶನವನ್ನು ಉದ್ಘಾಟಿಸಿದರು.

ಸ್ವದೇಶಿ ನಿರ್ಮಿತ ವಿಮಾನಗಳ ಪ್ರದರ್ಶನವನ್ನು  ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ವೀಕ್ಷಿಸಿದರು.
ಸ್ವದೇಶಿ ನಿರ್ಮಿತ ವಿಮಾನಗಳ ಪ್ರದರ್ಶನವನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ವೀಕ್ಷಿಸಿದರು. (ETV Bharat)

By ETV Bharat Karnataka Team

Published : May 27, 2024, 10:45 PM IST

Updated : May 28, 2024, 6:03 AM IST

ಬೆಂಗಳೂರು:ಅಮೃತ್ ಕಾಲದಲ್ಲಿ ಭಾರತದ ಉದಯವನ್ನು ನೋಡುತ್ತಿದ್ದೇವೆ. ಇದೇ ವೇಗದಲ್ಲಿ ಮುಂದುವರಿದರೆ ನಾವು ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಒಂದಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.

ಸೋಮವಾರ ನಗರದ ಎನ್ ಎ ಎಲ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಕಾರ್ಬನ್ ಫೈಬರ್ ಮತ್ತು ಪ್ರಿಪ್ರೆಗ್ಸ್ ಕೇಂದ್ರಕ್ಕೆ ಅಡಿಪಾಯ ಹಾಕುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಾವುದೇ ದೇಶ ಯೋಚನೆ ಮಾಡದಂತಹ ತಂತ್ರಜ್ಞಾನಗಳತ್ತ ಗಮನಹರಿಸುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ನಮ್ಮ ಕ್ವಾಂಟಮ್ ಕಂಪ್ಯೂಟಿಂಗ್ ವ್ಯವಸ್ಥೆ ಇದಕ್ಕೆ ದೊಡ್ದ ಉದಾಹರಣೆಯಾಗಿದೆ.

ಇನ್ನು ಎನ್ ಎ ಎಲ್ ಏರೋಸ್ಪೇಸ್ ಕ್ಷೇತ್ರಕ್ಕೆ ಮತ್ತು ಅದರಾಚೆಗೆ ಕೂಡ ಗಣನೀಯವಾಗಿ ಕೊಡುಗೆ ನೀಡಿದೆ. ಸಂಶೋಧನೆ ಮತ್ತು ಅಭಿವೃದ್ಧಿಯ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತದ ಬಾಹ್ಯಾಕಾಶ ಸಾಧನೆಗಳು ಜಾಗತಿಕವಾಗಿ ಗುರುತಿಸಲ್ಪಟ್ಟಿವೆ. ರಕ್ಷಣಾ ಕ್ಷೇತ್ರದಲ್ಲಿ ಮತ್ತು ಚಂದ್ರಯಾನ-3 ರಲ್ಲಿ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯವಾಗಿ ಸಂಸ್ಥೆಯ ವಿಂಡ್ ಟನಲ್ ವ್ಯವಸ್ಥೆ ಎಂಜಿನಿಯರಿಂಗ್ ವಿಸ್ಮಯಗಳಲ್ಲಿ ಒಂದಾಗಿದೆ. ಮೊದಲು ನೋಡಿದಾಗ ಸರಳವಾಗಿ ಕಾಣುತ್ತದೆ. ಆದರೆ ಅದು ಕಾರ್ಯನಿರ್ವಹಿಸುವುದನ್ನು ನೀಡುತ್ತಾ ಹೋದಂತೆ ಇಡೀ ದೇಹವು ರೋಮಾಂಚಗೊಂಡಂತೆ ಆಗುತ್ತದೆ. ತಾಂತ್ರಿಕ ಪ್ರಗತಿಯಲ್ಲಿ ಹೂಡಿಕೆ ಮಾಡುವ ದೇಶವು ಸುರಕ್ಷಿತ ಗಡಿಗಳನ್ನು ಹೊಂದಿರುತ್ತದೆ. ಸದ್ಯ ಸಾಂಪ್ರದಾಯಿಕ ಯುದ್ಧದ ದಿನಗಳು ಹೋಗಿವೆ.

ಯುದ್ಧದ ಬದಲಾಗುತ್ತಿರುವ ಡೈನಾಮಿಕ್ಸ್ ನಮಗೆ ತಿಳಿದಿದೆ. ಜಗತ್ತು ಸಾಂಪ್ರದಾಯಿಕ ಯುದ್ಧವನ್ನು ಮೀರಿ ಹೋಗಿದೆ. ಎಷ್ಟು ಬಲಶಾಲಿಯಾಗಿದ್ದೇವೆ ಎಂಬುದು ಪ್ರಯೋಗಾಲಯಗಳಲ್ಲಿ ನಿರ್ಧರಿಸಲ್ಪಡುತ್ತಿದೆ. ಆದರೆ, ಈ ವಿಚಾರದಲ್ಲಿ ನಮ್ಮ ದೇಶದ ಭವಿಷ್ಯ ಉಜ್ವಲವಾಗಿದೆ. ನಮ್ಮ ಜನರು ಹೆಚ್ಚಿನ ಬುದ್ಧಿಶಕ್ತಿ, ಶಿಕ್ಷಣದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಜಗತ್ತಿನಲ್ಲಿ ಅಪ್ರತಿಮ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಸ್ವದೇಶಿ ವಿಮಾನವು ಆತ್ಮನಿರ್ಭರ ಭಾರತದ ಸಂಕೇತ:ಸುಧಾರಿತ ವಾಯುಯಾನ ತಂತ್ರಜ್ಞಾನವನ್ನು ವಿನ್ಯಾಸಗೊಳಿಸುವ ಮತ್ತು ಉತ್ಪಾದಿಸುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿರುವ ಸ್ವದೇಶಿ ವಿಮಾನವು ನಿಜವಾಗಿಯೂ ಆತ್ಮನಿರ್ಭರ ಭಾರತದ ಸಂಕೇತವಾಗಿದೆ. ಹಳ್ಳಿಗಳಲ್ಲಿ ನೆಲೆಸಿರುವ ಮಹಿಳೆಯರು ಡ್ರೋನ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಪ್ರಧಾನಿ ಘೋಷಿಸಿದ್ದಾರೆ. ಶೇ.100ರಷ್ಟು ರಕ್ಷಣಾ ಸಾಧನಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ದೇಶ ಈಗ ಬಿಲಿಯನ್ ಡಾಲರ್ ರಫ್ತು ಮಾಡುತ್ತಿದೆ. ಇವು ಆತ್ಮನಿರ್ಭರತೆಯ ಪ್ರತಿಬಿಂಬವಾಗಿವೆ.

ಇವೆಲ್ಲ ಬೆಳವಣಿಗೆಗಳನ್ನು ನೋಡಿದರೆ 2047 ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವಾಗ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದ್ದು, ವಿಶ್ವದ ಆರ್ಥಿಕ ಶಕ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆಯಲ್ಲಿ ಸ್ವದೇಶಿ ನಿರ್ಮಿತ ವಿಮಾನಗಳ ಪ್ರದರ್ಶನವನ್ನು ವೀಕ್ಷಿಸಿ ಎನ್ಎಎಲ್ ತಂತ್ರಜ್ಞಾನಗಳ ಪ್ರದರ್ಶನವನ್ನು ಸಹ ಉಪರಾಷ್ಟ್ರಪತಿ ಜಗದೀಪ್ ಧನಕರ್ ಉದ್ಘಾಟಿಸಿದರು.

ಇದನ್ನೂ ಓದಿ:ಕೆಎಲ್ಇ ಕಾಹೆರ 14ನೇ ಘಟಿಕೋತ್ಸವ: 35 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರು, ಹೆಣ್ಮಕ್ಕಳೇ ಸ್ಟ್ರಾಂಗ್ ಗುರು - KLE Autonomous University

Last Updated : May 28, 2024, 6:03 AM IST

ABOUT THE AUTHOR

...view details