ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡ: ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್ ವಿಧಿವಶ - Kumble Sridhar Rao passed away

ಖ್ಯಾತ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಶುಕ್ರವಾರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

By ETV Bharat Karnataka Team

Published : Jul 5, 2024, 6:34 PM IST

ಕುಂಬಳೆ ಶ್ರೀಧರ್ ರಾವ್ ವಿಧಿವಶ
ಕುಂಬಳೆ ಶ್ರೀಧರ್ ರಾವ್ ವಿಧಿವಶ (ETV Bharat)

ದಕ್ಷಿಣ ಕನ್ನಡ:ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್ ಅವರು ಶುಕ್ರವಾರ ಹೃದಯಘಾತದಿಂದ ನಿಧನರಾಗಿದ್ದಾರೆ.
ಕೇರಳ ರಾಜ್ಯದ ಕಾಸರಗೋಡಿನ ಕುಂಬಳೆಯಲ್ಲಿ 1948ರಲ್ಲಿ ಜನಿಸಿದ ಇವರು ಕುಂಬಳೆ ಶ್ರೀಧರ ರಾವ್ ಎಂದೇ ಪ್ರಖ್ಯಾತರು. ಮೂರನೇ ತರಗತಿ ವ್ಯಾಸಂಗ ಮಾಡಿದ ಇವರು ದಿ.ಕೊರಗ ಶೆಟ್ಟಿಯವರ ಇರಾ(ಕುಂಡಾವು) ಮೇಳದಿಂದ ಯಕ್ಷಗಾನದ ವೃತ್ತಿ ಬದುಕು ಆರಂಭಿಸಿದರು. ಅಲ್ಲಿಂದ ಕೂಡ್ಲು, ಮತ್ತೆ ಇರಾ, ಮುಲ್ಕಿ, ಕರ್ನಾಟಕ ಮೇಳಗಳ ತಿರುಗಾಟ ನಡೆಸಿದರು. ಆ ಬಳಿಕ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ಆರಂಭಿಸಿದ ಇವರು ನಿರಂತರ 40 ವರ್ಷಗಳ ಕಾಲ ಇದೊಂದೇ ಮೇಳದಲ್ಲಿ ಗೆಜ್ಜೆ ಕಟ್ಟಿದವರು.

ಆರಂಭದಲ್ಲಿ ಸ್ತ್ರೀವೇಷಧಾರಿಯಾಗಿ ಪ್ರಸಿದ್ಧಿ ಗಳಿಸಿರುವ ಇವರು, ಕಯಾದು, ಲಕ್ಷ್ಮಿ, ದಮಯಂತಿ, ಚಿತ್ರಾಂಗದೆ, ಸುಭದ್ರೆ, ಯಶೋಧೆ, ಕುಂತಿ ಮುಂತಾದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಗರತಿ ಪಾತ್ರದಲ್ಲಿ ಎಲ್ಲರಿಗೂ ಇಷ್ಟವಾಗುವ ಇವರು ಧರ್ಮಸ್ಥಳ ಮೇಳ ಸೇರುವ ಕಾಲಕ್ಕೆ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮು ಬಲ್ಲಾಳ್ತಿ ಪಾತ್ರಕ್ಕೊಂದು ರೂಪುಕೊಟ್ಟಿದ್ದರು. ಆ ಬಳಿಕ ಈ ಪಾತ್ರವನ್ನು ತಮ್ಮದೇ ಆದ ದೃಷ್ಟಿಕೋನದಿಂದ ಬಹಳಷ್ಟು ಎತ್ತರಕ್ಕೆ ಏರಿಸಿದವರು ಕುಂಬಳೆ ಶ್ರೀಧರ ರಾಯರು‌. ವಿಶೇಷವೆಂದರೆ ಕುಂಬಳೆ ಶ್ರೀಧರ ರಾವ್ ಅವರು ಸ್ತ್ರೀ ಪಾತ್ರದಲ್ಲಿ ಉತ್ತುಂಗದಲ್ಲಿರುವಾಗಲೇ ಪುರುಷಪಾತ್ರಕ್ಕೆ ಯೂಟರ್ನ್ ಹೊಡೆದು ಅಲ್ಲೂ ಯಶಸ್ವಿಯಾದವರು.

ಸದ್ಯ ಪುತ್ತೂರಿನ 34 ನೆಕ್ಕಿಲಾಡಿ ಗ್ರಾಮದ ಬೇರಿಕೆಯಲ್ಲಿ ವಾಸವಾಗಿರುವ ಕುಂಬಳೆ ಶ್ರೀಧರ ರಾಯರಿಗೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು‌. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು‌. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ‌. ಮೃತರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ‌.ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸಂದರ್ಭದ ಪ್ರಶಸ್ತಿ, ಎಡನೀರು ಮಠದ ಸನ್ಮಾನ ದೊರಕಿದೆ.

ಇದನ್ನೂ ಓದಿ:ಉಡುಪಿ: ಯಕ್ಷ ಸಾಧಕ ಹಂದಾಡಿ ಬಾಲಕೃಷ್ಣ ನಾಯಕ್ ಇನ್ನಿಲ್ಲ

ABOUT THE AUTHOR

...view details